ನವದೆಹಲಿ: ಉತ್ತರ ಪ್ರದೇಶದ ಗೊಂಡಾದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಭಾಷಣದ ಮಧ್ಯೆ, ಉದ್ಯೋಗ ನೀಡುವಂತೆ ಯುವಕರು ದನಿ ಎತ್ತಿದ ಘಟನೆ ನಡೆದಿದೆ ಎಂದು ‘ಎನ್ಡಿಟಿವಿ’ ವರದಿ ಮಾಡಿದೆ.
ಭಾರತೀಯ ಸೇನೆಯಲ್ಲಿ ಉದ್ಯೋಗ ಕಲ್ಪಿಸುವಂತೆ ಯುವಕರು ಘೋಷಣೆ ಕೂಗಿದರು. ಅವರನ್ನು ಸಮಾಧಾನಪಡಿಸಿದ ರಾಜನಾಥ್, ನೇಮಕಾತಿ ಪ್ರಕ್ರಿಯೆ ನಡೆಯಲಿದೆ ಎಂದು ಭರವಸೆ ನೀಡಿದರು.
‘ಸೇನಾ ನೇಮಕಾತಿಯನ್ನು ಆರಂಭಿಸಿ’, ‘ನಮ್ಮ ಬೇಡಿಕೆಯನ್ನು ಈಡೇರಿಸಿ’ ಎಂಬ ಘೋಷಣೆಗಳು ಸಭಿಕರ ಸಾಲಿನಿಂದ ಕೇಳಿಬಂದವು. ‘ಚಿಂತಿಸಬೇಡಿ. ನೇಮಕಾತಿ ನಡೆಯತ್ತದೆ. ಕೊರೊನಾ ಕಾರಣದಿಂದ ಕೆಲವು ಅಡ್ಡಿಗಳು ಎದುರಾಗಿದ್ದವು’ ಎಂದು ರಾಜನಾಥ್ ವಿವರಿಸಿದರು. ಈ ಮಾತಿಗೆ ಸಮಾಧಾನಗೊಂಡ ಯುಕವರು, ‘ಭಾರತ್ ಮಾತಾಕಿ ಜೈ’ ಘೋಷಣೆ ಕೂಗಿ ತಮ್ಮ ಪ್ರತಿಭಟನೆಯನ್ನು ಅಂತ್ಯಗೊಳಿಸಿದರು.
‘ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ, ಪ್ರತೀ ವರ್ಷದ ಹೋಳಿ ಹಾಗೂ ದೀಪಾವಳಿ ಹಬ್ಬಗಳಿಗೆ ಎರಡು ಉಚಿತ ಎಲ್ಪಿಜಿ ಸಿಲಿಂಡರ್ ನೀಡುತ್ತೇವೆ’ ಎಂದು ರಾಜನಾಥ್ ಜನರಿಗೆ ಭರವಸೆ ನೀಡಿದರು.
ತಮ್ಮ ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಸರ್ಕಾರಿ ಹಾಗೂ ಖಾಸಗಿ ರಂಗದಲ್ಲಿ ಕೋಟ್ಯಂತರ ಉದ್ಯೋಗ ಸೃಷ್ಟಿಯಾಗಿವೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಟ್ವೀಟ್ ಮಾಡಿದ್ದರು. ಅವರ ಈ ಮಾತು ತೀವ್ರ ಟೀಕೆಗೆ ಗುರಿಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.