ಹೈದರಾಬಾದ್: ಬಿಆರ್ಎಸ್ ಎಂಎಲ್ಸಿ ಕೆ. ಕವಿತಾ ಗುರುವಾರ ಪಕ್ಷದಲ್ಲಿರುವ ತಮ್ಮ ವಿರೋಧಿಗಳ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದು, ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ನೇತೃತ್ವದ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಲು ಕೆಲವು ಶಕ್ತಿಗಳು ಪ್ರಯತ್ನಿಸಿವೆ ಮತ್ತು ಪ್ರಯತ್ನಿಸುತ್ತಲೇ ಇವೆ ಎಂದು ಆರೋಪಿಸಿದ್ದಾರೆ.
ತಮ್ಮ ಸಹೋದರ ಮತ್ತು ಬಿಆರ್ಎಸ್ ಕಾರ್ಯಾಧ್ಯಕ್ಷ ಕೆ.ಟಿ. ರಾಮರಾವ್ ಅವರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಅವರು, ಈ ವಿಲೀನ ಪ್ರಸ್ತಾಪವನ್ನು ಜೈಲಿನಲ್ಲಿದ್ದಾಗ ತಮ್ಮ ಬಳಿಗೆ ತರಲಾಗಿತ್ತು. ಆದರೆ, ಅದನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದೆ ಎಂದಿದ್ದಾರೆ.
ಮಾಧ್ಯಮದವರ ಜೊತೆ ಅನೌಪಚಾರಿಕ ಸಂಭಾಷಣೆಯಲ್ಲಿ, ಸಾಮಾಜಿಕ ಮಾಧ್ಯಮ ಮತ್ತು ಸ್ಥಳೀಯ ಪತ್ರಿಕೆಗಳಲ್ಲಿ ತಮಗೆ ಅಪಖ್ಯಾತಿ ತರಲು ಯತ್ನಿಸುತ್ತಿದ್ದಾಗ ಪಕ್ಷದ ನಾಯಕರು (ಕೆಸಿಆರ್ ಹೊರತುಪಡಿಸಿ) ತಮ್ಮನ್ನು ರಕ್ಷಿಸಲು ಬಾರದಿದ್ದಕ್ಕಾಗಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತೆಲಂಗಾಣ ಸಂಪನ್ಮೂಲಗಳನ್ನು ಲೂಟಿ ಮಾಡಲು ಪ್ರಯತ್ನಿಸುತ್ತಿರುವ ಬಿಜೆಪಿಯನ್ನು ನಿಯಂತ್ರಿಸುವ ಬದಲು, ಬಿಆರ್ಎಸ್ ಅನ್ನು ಬಿಜೆಪಿಗೆ ಒಪ್ಪಿಸುವ ಪ್ರಯತ್ನಗಳು ನಡೆಯುತ್ತಿವೆ ಎಂಬುದು ನನ್ನ ಅಭಿಪ್ರಾಯ. ಏಕೆಂದರೆ ನಾನು ಜೈಲಿನಲ್ಲಿದ್ದಾಗ, ಅದೇ ಪ್ರಸ್ತಾಪವನ್ನು ನನ್ನ ಬಳಿಗೆ ತರಲಾಗಿತ್ತು. ನಾನು ದೃಢವಾಗಿ ತಿರಸ್ಕರಿಸಿದ್ದೆ. ಬಿಆರ್ಎಸ್ ತೆಲಂಗಾಣ ಜನರಿಗೆ ಶ್ರೀರಾಮ ರಕ್ಷೆ ಇದ್ದಂತೆ ಎಂದು ಅವರು ಹೇಳಿದ್ದಾರೆ.
ಕವಿತಾ ಅವರು ತಮ್ಮ ತಂದೆ ಮತ್ತು ಪಕ್ಷದ ಅಧ್ಯಕ್ಷ ಚಂದ್ರಶೇಖರ್ ರಾವ್ ಅವರಿಗೆ ಬರೆದ ಪತ್ರ ಸೋರಿಕೆಯಾಗಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ಬಿಆರ್ಎಸ್ ಒಳಗಿನ ಆಂತರಿಕ ಭಿನ್ನಾಭಿಪ್ರಾಯಗಳು ಮುನ್ನೆಲೆಗೆ ಬಂದಿವೆ.
ಪಕ್ಷದಲ್ಲಿ ಕೆಲವು ಪಿತೂರಿಗಳು ನಡೆಯುತ್ತಿವೆ ಎಂದು ಅವರು ಹೇಳಿದ್ದರು. ಕೆಸಿಆರ್ ಕೆಲವು ದೆವ್ವಗಳಿಂದ ಸುತ್ತುವರೆದಿರುವ ದೇವರಂತೆ. ಬಿಆರ್ಎಸ್ ತೆಲಂಗಾಣಕ್ಕೆ ಚೈತನ್ಯದ ಮತ್ತು ರಾಜ್ಯದ ಅಸ್ತಿತ್ವದ ಮೂಲ ಕಾರಣವಾದ ಪಕ್ಷವಾಗಿದೆ. ಇದನ್ನು ರಾಷ್ಟ್ರೀಯ ಪಕ್ಷದೊಂದಿಗೆ ವಿಲೀನಗೊಳಿಸಬಾರದೆಂದು ತಂದೆ ಕೆಸಿಆರ್ಗೆ ತಿಳಿಸಲಾಗಿದೆ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.