ನವದೆಹಲಿ: ಮಹಾರಾಷ್ಟ್ರದ ಅಲಿಬಾಗ್ ಪಟ್ಟಣದಲ್ಲಿ ಬೇನಾಮಿ ಆಸ್ತಿಯ ಲಾಭ ಪಡೆದಿದ್ದ ಆರೋಪದಿಂದ ಬಾಲಿವುಡ್ ನಟ ಶಾರುಖ್ ಖಾನ್ ಹೊರಬಂದಿದ್ದಾರೆ. ಆದಾಯ ತೆರಿಗೆ ಇಲಾಖೆ ವಶಕ್ಕೆ ಪಡೆದಿದ್ದ ಆಸ್ತಿಯನ್ನು ಮೇಲ್ಮನವಿ ಪ್ರಾಧಿಕಾರ ಕಾನೂನು ಸಮ್ಮತವಾಗಿ ಹಿಂದಕ್ಕೆ ನೀಡಿದ್ದಲ್ಲದೆ ಶಾರುಖ್ ವಿರುದ್ಧದ ಆರೋಪಆಧಾರರಹಿತ ಎಂದು ಹೇಳಿದೆ.
ನಟ ಶಾರುಖ್ ಮತ್ತು ಪತ್ನಿ ಗೌರಿಖಾನ್, ಸಂಬಂಧಿಗಳು ಷೇರುದಾರರಾಗಿರುವ ಕಂಪನಿ ವಿರುದ್ಧ ಕಳೆದ ವರ್ಷದ ಫೆಬ್ರುವರಿಯಲ್ಲಿ ಆದಾಯ ತೆರಿಗೆ ಇಲಾಖೆ ನೀಡಿದ್ದ ನೋಟಿಸ್ ಅನ್ನು ನ್ಯಾಯತೀರ್ಮಾನ ಪ್ರಾಧಿಕಾರ ರದ್ದುಪಡಿಸಿದೆ. ಸ್ವತಂತ್ರ ಸಂಸ್ಥೆಯೊಂದು ನಡೆಸಿದ ವಾಣಿಜ್ಯ ವಹಿವಾಟನ್ನು ಬೇನಾಮಿ ವ್ಯವಹಾರ ಎಂದು ಪರಿಗಣಿಸಲಾಗದು. ಏಕೆಂದರೆ ಇದಕ್ಕೆ ಸಾಲದ ರೂಪದಲ್ಲಿ ಹಣಕಾಸು ಒದಗಿಸಲಾಗಿದೆ ಎಂದು ಪ್ರಾಧಿಕಾರ ಹೇಳಿದೆ.
ನ್ಯಾಯತೀರ್ಮಾನ ಪ್ರಾಧಿಕಾರದ ಅಧ್ಯಕ್ಷ ಡಿ.ಸಿಂಘಾಯಿ ಮತ್ತು ಸದಸ್ಯ (ಕಾನೂನು) ತುಷಾರ್ ವಿ.ಶಾ ಅವರನ್ನು ಒಳಗೊಂಡ ವಿಭಾಗೀಯ ನ್ಯಾಯಪೀಠ ಶಾರುಖ್ ಅವರನ್ನು ಆರೋಪಮುಕ್ತಗೊಳಿಸಿದೆ.
ಅಲಿಬಾಗ್ ಕೃಷಿ ಭೂಮಿಯಲ್ಲಿ ನಿರ್ಮಿಸಲಾದ ಫಾರ್ಮ್ ಹೌಸ್ ಮತ್ತು ಫ್ಲಾಟ್ ಅನ್ನು ಆದಾಯ ತೆರಿಗೆ ಇಲಾಖೆ ಮುಟ್ಟುಗೋಲು ಹಾಕಿಕೊಂಡಿತ್ತು. ಈ ಆಸ್ತಿಗಳ ಮೌಲ್ಯ ₹15 ಕೋಟಿ. ಅಲ್ಲದೆ ಮೇಸರ್ಸ್ ದೇಜ ವು ಫಾರ್ಮ್ಸ್ ಪ್ರೈವೇಟ್ ಲಿ. ಬೇನಾಮಿದಾರ ಕಂಪನಿ ಎಂದು ಹೆಸರಿಸಿತ್ತು. ಶಾರುಖ್ ವಿರುದ್ಧ ಬೇನಾಮಿ ಆಸ್ತಿ ವ್ಯವಹಾರ ನಿಷೇಧ ಕಾಯಿದೆ ಅಡಿ ದೂರು ದಾಖಲಿಸಿಕೊಂಡಿತ್ತು.
ಕಪ್ಪು ಹಣ ಮತ್ತು ಅಕ್ರಮವಾಗಿ ಹಣ ಸಂಗ್ರಹವನ್ನು ತಡೆಯುವ ಉದ್ದೇಶದಿಂದ 2016ರ ನವೆಂಬರ್ನಲ್ಲಿ ಜಾರಿಯಾದ ಬೇನಾಮಿ ಆಸ್ತಿ ನಿಷೇಧ ಕಾಯ್ದೆಯಡಿ ಆರೋಪಗಳು ಸಾಬೀತಾದರೆ ಏಳು ವರ್ಷಗಳವರೆಗೆ ಕಠಿಣ ಶಿಕ್ಷೆ ಅನುಭವಿಸಬೇಕಾಗುತ್ತದೆ. ಅಲ್ಲದೆ ಬೇನಾಮಿ ಆಸ್ತಿಯ ಮಾರುಕಟ್ಟೆ ಮೌಲ್ಯದ ಶೇ 25 ರಷ್ಟು ದಂಡಕಟ್ಟಬೇಕಾಗುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.