ಅಯೋಧ್ಯೆ: ಅಯೋಧ್ಯೆಯಲ್ಲಿ ಸೋಮವಾರ (ಡಿ.6) ಪರಿಸ್ಥಿತಿ ಶಾಂತವಾಗಿದ್ದು, ಭದ್ರತಾ ಪಡೆಗಳು ಕಟ್ಟೆಚ್ಚರ ವಹಿಸಿವೆ.
ಈ ನಡುವೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದತ್ತ ಗಮನ ಹರಿಸಿದ್ದೇವೆ ಎಂದು ವಿಶ್ವ ಹಿಂದೂ ಪರಿಷತ್ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ಹೇಳಿದ್ದಾರೆ.
ರಾಮ ಮಂದಿರ ನಿರ್ಮಾಣದ ಬಳಿಕ ಮಥುರಾ ವಿಚಾರವನ್ನು ಕೈಗೆತ್ತಿಕೊಳ್ಳುವುದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ. 2024ರಲ್ಲಿ ಮಥುರಾ ವಿವಾದವನ್ನು ಪರಿಗಣಿಸಲಾಗುವುದು ಎಂದು ತಿಳಿಸಿದ್ದಾರೆ.
ಡಿಸೆಂಬರ್ 6 ಇಡೀ ದೇಶಕ್ಕೆ ಮಹತ್ತರ ದಿನವಾಗಿದೆ. ಅದಕ್ಕಾಗಿಯೇ ಬಜರಂಗದಳವು ಈ ದಿನವನ್ನು 'ಶೌರ್ಯ ದಿವಸ'ವಾಗಿ ಆಚರಿಸುತ್ತದೆ. ಈ ದಿನವನ್ನು ಗುರುತಿಸಲು ಕಾರ್ಯಕ್ರಮಗಳು ನಡೆಯುತ್ತಿದ್ದವು. ಅದೇ ರೀತಿ ಕಾರ್ಯಕ್ರಮಗಳು ನಡೆಯಲಿವೆ ಎಂದಿದ್ದಾರೆ.
ಈ ನಡುವೆ ಬಾಬರಿ ಮಸೀದಿ ಧ್ವಂಸದ ಹಿಂಸಾಚಾರದಲ್ಲಿ ಮಡಿದವರಿಗಾಗಿ ಪ್ರಾರ್ಥನೆಯನ್ನು ಹೊರತುಪಡಿಸಿ ಯಾವುದೇ ಕಾರ್ಯಕ್ರಮವನ್ನು ಆಯೋಜಿಸುವುದಿಲ್ಲ ಎಂದು ಮುಸ್ಲಿಂ ಸಮುದಾಯ ಹೇಳಿಕೊಂಡಿದೆ.
ತೀರ್ಪು ಮಂದಿರದ ಪರವಾಗಿ ಬಂದಿದೆ. ಆದ್ದರಿಂದ ಯಾವುದೇ ಕಾರ್ಯಕ್ರಮದ ಅಗತ್ಯವಿಲ್ಲ. ಆದರೆ ಯಾರಾದರೂ ಮಥುರಾ ವಿವಾದವನ್ನು ಪ್ರಸ್ತಾಪಿಸಿದರೆ ತಕ್ಕ ಉತ್ತರ ನೀಡುತ್ತೇವೆ ಎಂದು ಪ್ರಕರಣದ ಅರ್ಜಿದಾರರಾದ ಹಾಜಿ ಮೆಹಬೂಬ್ ಪ್ರತಿಕ್ರಿಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.