ಲಖನೌ: ಸುನ್ನಿ ಕೇಂದ್ರೀಯ ವಕ್ಫ್ ಮಂಡಳಿ ಮಂಗಳವಾರ ಇಲ್ಲಿ ಸಭೆಸೇರಲಿದ್ದು, ಅಯೋಧ್ಯೆ ವಿವಾದ ಕುರಿತಂತೆ ಸುಪ್ರೀಂ ಕೋರ್ಟ್ ತೀರ್ಪು ಕುರಿತು ಚರ್ಚಿಸಲಿದೆ. ತೀರ್ಪು ಪ್ರಶ್ನಿಸಿ ಮೇಲ್ಮನವಿಯನ್ನು ಸಲ್ಲಿಸಬೇಕೇ, ಬೇಡವೇ ಎಂಬ ಬಗ್ಗೆ ಸದಸ್ಯರಲ್ಲಿ ವಿಭಿನ್ನ ಅಭಿಪ್ರಾಯಗಳಿವೆ. ಹೀಗಾಗಿ, ಸಭೆ ಮಹತ್ವದ್ದಾಗಿದೆ.
ಸುಪ್ರೀಂ ಕೋರ್ಟ್ ಆದೇಶಿಸಿರುವಂತೆ ಮಸೀದಿಯನ್ನು ನಿರ್ಮಿಸಲು ಭೂಮಿ ಪಡೆಯವ ಕುರಿತಂತೆಯೂ ಸಭೆ ಚರ್ಚೆ ನಡೆಸುವ ಸಂಭವವಿದೆ ಎಂದು ಮಂಡಳಿ ಅಧ್ಯಕ್ಷ ಜುಫರ್ ಫರೂಕಿ ಸೋಮವಾರ ತಿಳಿಸಿದರು.
ರಾಮಜನ್ಮಭೂಮಿ –ಬಾಬರಿ ಮಸೀದಿ ನಿವೇಶನ ವಿವಾದ ಕುರಿತು ‘ಸುಪ್ರೀಂ’ನ ಪಂಚ ನ್ಯಾಯಮೂರ್ತಿಗಳಿದ್ದ ಪೀಠ ನೀಡಿದ್ದ ಐತಿಹಾಸಿಕ ತೀರ್ಪು ಪ್ರಶ್ನಿಸಿ ಮೇಲ್ಮನವಿಯನ್ನು ಸಲ್ಲಿಸುವುದು ಬೇಡ ಎಂದು ಈ ಮೊದಲು ಫರೂಕಿ ಪ್ರತಿಪಾದಿಸಿದ್ದರು. ಕೆಲ ಸದಸ್ಯರು ಇದಕ್ಕೆ ಭಿನ್ನವಾದ ನಿಲುವು ವ್ಯಕ್ತಪಡಿಸಿದ್ದರು.
‘ಮಂಗಳವಾರದ ಸಭೆಯಲ್ಲಿ ಸದಸ್ಯರು ಯಾವುದೇ ವಿಷಯ ಕುರಿತು ಚರ್ಚಿಸಬಹುದು. ಮಂಡಳಿ ಪರವಾಗಿ ನಿರ್ಧಾರ ಕೈಗೊಳ್ಳಲು ನನಗೆ ಅಧಿಕಾರ ನೀಡಲಾಗಿದೆ. ಇದಕ್ಕೆ ಯಾರದ್ದಾದರೂ ತಕರಾರು ಇದ್ದರೆ ಸಭೆಯಲ್ಲಿ ವಿಷಯ ಪ್ರಸ್ತಾಪಿಸಬಹುದು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.