ನಾಗ್ಪುರ: ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ 14 ತಿಂಗಳ ಮಗುವಿನ ವೈದ್ಯಕೀಯ ತುರ್ತುಸ್ಥಿತಿ ಕಾರಣದಿಂದಾಗಿ ಬೆಂಗಳೂರು-ನವದೆಹಲಿ ನಡುವಿನ ವಿಸ್ತಾರ ವಿಮಾನದ ಮಾರ್ಗವನ್ನು ಬದಲಿಸಿ ಭಾನುವಾರ ತಡರಾತ್ರಿ ನಾಗ್ಪುರ ವಿಮಾನ ನಿಲ್ದಾಣದಲ್ಲಿ ಇಳಿಸಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನ ಹಾರಾಟದ ವೇಳೆಯ ಹೃದಯ ಸ್ತಂಭನಕ್ಕೆ ಒಳಗಾಗಿದ್ದ ಮಗು ಪ್ರಜ್ಞಾಹೀನತೆಗೆ ಜಾರಿತ್ತು ಎಂದು ನಾಗ್ಪುರದ ಕಿಮ್ಸ್-ಕಿಂಗ್ಸ್ವೇ ಆಸ್ಪತ್ರೆಯ ಸಂವಹನ ವಿಭಾಗದ ಅಧಿಕಾರಿ ಏಜಾಜ್ ಶಮಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
‘ಅದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೈದ್ಯರು ಮಗುವಿಗೆ ಸಿಪಿಆರ್ (ಕಾರ್ಡಿಯೊಪಲ್ಮನರಿ ರಿಸಸಿಟೇಷನ್ – ಹೃದಯ ಶ್ವಾಸಕೋಶವನ್ನು ಮರುಜೀವಗೊಳಿಸುವುದು) ಮಾಡುವ ಮೂಲಕ ಜೀವರಕ್ಷಕ ಕ್ರಮಗಳನ್ನು ಕೈಗೊಂಡಿದ್ದರು’ ಎಂದು ಶಮಿ ಪಿಟಿಐಗೆ ತಿಳಿಸಿದರು.
ಯಾವುದೇ ವ್ಯಕ್ತಿ ಹೃದಯಸ್ತಂಭನಕ್ಕೆ ಒಳಗಾದಾಗ ಅಥವಾ ಉಸಿರಾಟ ನಿಂತಾಗ ಸಿಪಿಆರ್ ಮಾಡುವುದು ಅತ್ಯಗತ್ಯವಾಗಿದ್ದು, ಅದೊಂದು ಜೀವರಕ್ಷಕ ತಂತ್ರ.
ವಿಮಾನದಲ್ಲಿ ವೈದ್ಯರ ಪ್ರಯತ್ನಗಳ ಹೊರತಾಗಿಯೂ ಮಗುವಿನ ಪರಿಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ನಾಗ್ಪುರ ಏರ್ಪೋರ್ಟ್ ಅಧಿಕಾರಿಗಳೊಂದಿಗೆ ಮಾತನಾಡಿದ ವಿಮಾನ ಸಿಬ್ಬಂದಿ, ವಿಮಾನವನ್ನು ಇಳಿಸಿದ್ದಾರೆ. ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದ ಆಂಬುಲೆನ್ಸ್ ಮೂಲಕ ಮಗುವನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಕ್ಕಳ ಆರೈಕೆ ವಿಭಾಗದ ಹಿರಿಯ ವೈದ್ಯರು ಮಗುವಿಗೆ ಚಿಕಿತ್ಸೆ ನೀಡಿದ್ದಾರೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದರು.
ಮಗುವನ್ನು ವೆಂಟಿಲೇಟರ್ನಲ್ಲಿಟ್ಟು ಜೀವರಕ್ಷಕ ಔಷಧಗಳನ್ನು ನೀಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.