ಕೋಲ್ಕತ್ತ: ಬಿಜೆಪಿಯ ಪಶ್ಚಿಮ ಬಂಗಾಳ ರಾಜ್ಯ ಘಟಕದ ಅಧ್ಯಕ್ಷ ದಿಲೀಪ್ ಘೋಷ್ ಅವರು, ‘ಕೃಷ್ಣಾನಗರ ಲೋಕಸಭಾ ಕ್ಷೇತ್ರದಲ್ಲಿನ ಹಿಂದೂಗಳ ಬಗ್ಗೆ ನನಗೆ ಕನಿಕರವಿಲ್ಲ. ಅವರು ನಮ್ಮ ಪಕ್ಷಕ್ಕೆ ವೋಟು ಹಾಕಿಲ್ಲ’ ಎಂದು ಹೇಳಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಘೋಷ್ ಅವರು ಪಕ್ಷದ ಕಾರ್ಯಕರ್ತ ಎಂದು ಭಾವಿಸಲಾದ ಇನ್ನೊಬ್ಬವ್ಯಕ್ತಿ ಜೊತೆ ಮಾತನಾಡುತ್ತ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ಸಾಕಷ್ಟು ಸಂಖ್ಯೆಯಲ್ಲಿ ಹಿಂದೂಗಳು ಸತ್ತಿದ್ದಾರೆ. ಇನ್ನೊಂದಷ್ಟು ಜನರು ಸತ್ತರೂ ಚಿಂತೆಯಿಲ್ಲ’ ಎಂದು ಹೇಳಿರುವುದು ವಿಡಿಯೊದಲ್ಲಿ ಇದೆ.
‘ಕೃಷ್ಣಾನಗರದಲ್ಲಿ ಬಿಜೆಪಿ ಸೋತಿದ್ದೇಕೆ? ಅಲ್ಲಿ ಪಕ್ಷ ಬಲಪಡಿಸಬೇಕಿದ್ದು ಯಾರು? ನಾನಾ, ಹಿಂದೂಗಳಾ? ಹಿಂದೆ ಬಿಜೆಪಿ ನಾಯಕ ಸತ್ಯಬ್ರತ ಮುಖರ್ಜಿಯನ್ನು ಸೋಲಿಸಿದ್ದರು. ಈಗ ಕಲ್ಯಾಣ್ ಚೌಬೆ ಅವರನ್ನು ಸೋಲಿಸಿದ್ದಾರೆ. ಅವರ ಪರ ನಾವೇಕೆ ಕೆಲಸ ಮಾಡಬೇಕು’ ಎಂದು ಘೋಷ್ ಹೇಳಿದ್ದು ವಿಡಿಯೊದಲ್ಲಿದೆ.
ವಿಡಿಯೊ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಘೋಷ್, ‘ಆ ಮಾತುಗಳನ್ನು ಹೇಳಿದ್ದು ನಿಜ. ಭ್ರಮನಿರಸನದಿಂದ ಹಾಗೆ ಹೇಳಿದ್ದೆ. ಬಿಜೆಪಿಗೆ ವೋಟು ಹಾಕದಿದ್ದರೂ ಕೃಷ್ಣಾನಗರದ ಹಿಂದೂಗಳ ರಕ್ಷಣೆಗೆ ಕ್ರಮ ವಹಿಸಿದ್ದೇವೆ. ಅಲ್ಲಿನ ಹಿಂದೂಗಳ ರಕ್ಷಣೆಗೆ ಹೋಗುವವವರು ನಾವೇ (ಬಿಜೆಪಿ)’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.