ADVERTISEMENT

ಟಿಎಂಸಿ ಸುಳ್ಳು ಆರೋಪ ಮಾಡುತ್ತಿದೆ: ಬಂಗಾಳ ರಾಜ್ಯಪಾಲ ಜಗದೀಪ್ ಧನಖರ್

ಪಿಟಿಐ
Published 7 ಜೂನ್ 2021, 9:40 IST
Last Updated 7 ಜೂನ್ 2021, 9:40 IST
ಜಗದೀಪ್ ಧನಖರ್
ಜಗದೀಪ್ ಧನಖರ್   

ಕೋಲ್ಕತ್ತ: ರಾಜಭವನದಲ್ಲಿ ವಿಶೇಷ ಕರ್ತವ್ಯ ಅಧಿಕಾರಿಯಾಗಿ ರಾಜ್ಯಪಾಲರ ಸಂಬಂಧಿಕರನ್ನು ನೇಮಿಸಿಕೊಳ್ಳಲಾಗಿದೆ ಎಂದು ಟಿಎಂಸಿ ಸಂಸದ ಮಹುವಾ ಮೊಯಿತ್ರಾ ಮಾಡಿರುವ ಆರೋಪವನ್ನು ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧನಖರ್ ಅಲ್ಲಗಳೆದಿದ್ದಾರೆ.

ರಾಜ್ಯದಲ್ಲಿ ಕಾನೂನು, ಸುವ್ಯವಸ್ಥೆ ಹದಗೆಟ್ಟಿದೆ. ಇದರಿಂದ ಗಮನ ಬೇರೆಡೆ ಸೆಳೆಯಲು ತಮ್ಮ ವಿರುದ್ಧ ಆರೋಪ ಮಾಡಲಾಗಿದೆ ಎಂದು ಧನಖರ್ ಹೇಳಿದ್ದಾರೆ.

ವಿಶೇಷ ಕರ್ತವ್ಯದಲ್ಲಿರುವ 6 ಮಂದಿ ಅಧಿಕಾರಿಗಳು ನನ್ನ ಕುಟುಂಬದ ಆಪ್ತರಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ADVERTISEMENT

‘ರಾಜಭವನದಲ್ಲಿರುವ 6 ಮಂದಿ ವಿಶೇಷ ಕರ್ತವ್ಯ ಅಧಿಕಾರಿಗಳು ನನ್ನ ಸಂಬಂಧಿಕರೆಂದು ಟಿಎಂಸಿ ಸಂಸದ ಮಹುವಾ ಮೊಯಿತ್ರಾ ಟ್ವೀಟ್ ಮೂಲಕ ಮಾಡಿರುವ ಆರೋಪ ನಿಜವಲ್ಲ. ವಿಶೇಷ ಕರ್ತವ್ಯ ಅಧಿಕಾರಿಗಳು ಮೂರು ರಾಜ್ಯಗಳವರಾಗಿದ್ದು, ನಾಲ್ಕು ಭಿನ್ನ ಸಮುದಾಯಗಳಿಗೆ ಸೇರಿದವರು. ಅವರು ಯಾರೂ ನನ್ನ ಕುಟುಂಬದ ಆಪ್ತರಲ್ಲ. ಆ ಪೈಕಿ ನಾಲ್ವರಂತೂ ನನ್ನ ಸಮುದಾಯ, ರಾಜ್ಯದವರೂ ಅಲ್ಲ’ ಎಂದು ಧನಖರ್ ಟ್ವೀಟ್ ಮಾಡಿದ್ದಾರೆ.

ರಾಜ್ಯದ ಕಾನೂನು–ಸುವ್ಯವಸ್ಥೆಗೆ ಸಂಬಂಧಿಸಿ ರಾಜ್ಯಪಾಲರು ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರವನ್ನು ಭಾನುವಾರ ತರಾಟೆಗೆ ತೆಗೆದುಕೊಂಡಿದ್ದರು. ಮಮತಾ ಬ್ಯಾನರ್ಜಿ ನೇತೃತ್ವದ ಆಡಳಿತ ಇರುವ ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಬಳಿಕ ನಡೆಯುತ್ತಿರುವ ತಡೆಯಿಲ್ಲದ ಹಿಂಸಾಚಾರವು ಮನುಷ್ಯತ್ವವನ್ನು ನಾಚಿಸುವಂತಿದೆ. ಇಂತಹ ಕೃತ್ಯಗಳಲ್ಲಿ ತೊಡಗಿರುವವರನ್ನು ನಿಯಂತ್ರಿಸಲು ರಾಜ್ಯ ಪೊಲೀಸ್‌ ವ್ಯವಸ್ಥೆಗೆ ಸಾಧ್ಯವಾಗಿಲ್ಲ. ಗಲಭೆ ಕೃತ್ಯದಲ್ಲಿ ಭಾಗಿಯಾದವರನ್ನು ಶಿಕ್ಷಿಸಬೇಕು ಮತ್ತು ಶಿಸ್ತು ಮೂಡಿಸಬೇಕು ಎಂದು ರಾಜ್ಯಪಾಲರು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.