ಕೋಲ್ಕತ್ತ: ಪಶ್ಚಿಮ ಬಂಗಾಳದ ಮತದಾರರ ಪಟ್ಟಿ ಪರಿಷ್ಕರಣೆ ವಿವಾದಕ್ಕೆ ಸಂಬಂಧಿಸಿದಂತೆ ‘ಕಳಂಕಿತ’ ಅಧಿಕಾರಿಗಳನ್ನು ವಜಾಗೊಳಿಸದಿರುವ ನಿರ್ಧಾರದ ಬಗ್ಗೆ ಚುನಾವಣಾ ಆಯೋಗವು (ಇಸಿಐ) ರಾಜ್ಯ ಸರ್ಕಾರದ ವಿವರಣೆ ಕೋರಿದೆ.
ಆಗಸ್ಟ್ 13ರಂದು ಸಂಜೆ 5ರ ಒಳಗೆ ದೆಹಲಿಯಲ್ಲಿರುವ ಆಯೋಗದ ಕೇಂದ್ರ ಕಚೇರಿಗೆ ಬಂದು ಈ ಬಗ್ಗೆ ವಿವರಣೆ ನೀಡಬೇಕು ಎಂದು ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ಮನೋಜ್ ಪಂತ್ ಅವರಿಗೆ ಸೂಚಿಸಿದೆ.
ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ‘ಅಕ್ರಮ’ ಎಸಗಿದ್ದಾರೆಂದು ಆರೋಪಿಸಲಾದ ಅಧಿಕಾರಿಗಳನ್ನು ಅಮಾನತುಗೊಳಿಸುವ ಉದ್ದೇಶವಿಲ್ಲ ಎಂದು ಪಂತ್ ಅವರು ಚುನಾವಣಾ ಆಯೋಗಕ್ಕೆ ಪತ್ರ ಬರೆದ ಒಂದು ದಿನದ ಬಳಿಕ ಈ ಬೆಳವಣಿಗೆ ನಡೆದಿದೆ.
ಚುನಾವಣಾ ಆಯೋಗವು ಗುರುತಿಸಿರುವ ಅಧಿಕಾರಿಗಳನ್ನು ಅಮಾನತುಗೊಳಿಸುವುದು ಮತ್ತು ಅವರ ವಿರುದ್ಧ ಎಫ್ಐಆರ್ ದಾಖಲಿಸುವುದು ‘ತುಂಬಾ ಕಠಿಣ’ ಕ್ರಮ ಎನಿಸಲಿದೆ. ಇದು ಬಂಗಾಳದ ಅಧಿಕಾರಿಗಳ ‘ಧೈರ್ಯಗುಂದಿಸಲಿದೆ’ ಎಂದು ಮುಖ್ಯ ಕಾರ್ಯದರ್ಶಿಯವರು ತಮ್ಮ ಪತ್ರದಲ್ಲಿ ಕಾರಣ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.