ನವದೆಹಲಿ: ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರವು ಮಹಿಳಾ ಭದ್ರತೆಯ ಪ್ರಚಾರಕ್ಕಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದೆ. ಆದರೆ ಇದಕ್ಕೆ ಸಂಬಂಧಿಸಿದ ತಳಮಟ್ಟದ ಸಮಸ್ಯೆಗಳ ಬಗ್ಗೆ ನಿರ್ಲಕ್ಷ್ಯ ಮನೋಭಾವವನ್ನು ಹೊಂದಿದೆ’ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಆರೋಸಿದ್ದಾರೆ.
ಈ ಬಗ್ಗೆ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿರುವ ಅವರು,‘ ಬೇಟಿ ಬಚಾವೋ’ ಮತ್ತು ‘ಮಿಷನ್ ಶಕ್ತಿ’ ಕೇವಲ ಟೊಳ್ಳು ಘೋಷಣೆಗಳಾಗಿವೆ ಎಂದಿದ್ದಾರೆ. ಇದರೊಂದಿಗೆ ಮಾಧ್ಯಮ ವರದಿಗಳನ್ನು ಹಂಚಿಕೊಂಡಿದ್ದಾರೆ.
‘ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ರಾಜ್ಯದಲ್ಲಿ ಮಹಿಳೆಯರ ಭದ್ರತೆ ಹೇಗಿದೆ ಎಂಬುದು ಮಾಧ್ಯಮದಲ್ಲಿ ಪ್ರಕಟವಾದ ಸುದ್ದಿಗಳೇ ಹೇಳುತ್ತದೆ. ಸರ್ಕಾರವು ‘ಮಿಷನ್ ಶಕ್ತಿ’ ಹೆಸರಿನಲ್ಲಿ ಸುಳ್ಳು ಪ್ರಚಾರಕ್ಕಾಗಿ ಕೋಟ್ಯಂತರ ರೂಪಾಯಿಯನ್ನು ಖರ್ಚು ಮಾಡುತ್ತಿದೆ’ ಎಂದು ಪ್ರಿಯಾಂಕಾ ದೂರಿದ್ದಾರೆ.
‘ಉತ್ತರ ಪ್ರದೇಶದಲ್ಲಿ ಪ್ರತಿದಿನ ಮಹಿಳೆಯರ ವಿರುದ್ಧ ಸರಾಸರಿ 165 ಅಪರಾಧಗಳು ನಡೆಯುತ್ತವೆ. ಇತ್ತೀಚೆಗೆ ಮಹಿಳೆಯರ ವಿರುದ್ಧದ ಪ್ರಕರಣಗಳಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿರುವಂತಹ 100 ಕ್ಕೂ ಹೆಚ್ಚು ಪ್ರಕರಣಗಳು ಬೆಳಕಿಗೆ ಬಂದಿವೆ’ ಎಂದು ಅವರು ತಿಳಿಸಿದರು.
‘ಒಂದೆಡೆ ಮಹಿಳೆಯರ ಭದ್ರತೆಯ ಪ್ರಚಾರಕ್ಕಾಗಿ ಸರ್ಕಾರ ಕೋಟ್ಯಾಂತರ ರೂಪಾಯಿ ಖರ್ಚು ಮಾಡುತ್ತಿದೆ. ಇನ್ನೊಂದೆಡೆ ಅದೇ ಸರ್ಕಾರದ ಪೊಲೀಸರು, ಸಂತ್ರಸ್ತ ಮಹಿಳೆ ಸಹಾಯ ಕೇಳಿದಾಗ ಆಕೆಗೆ ಸಹಾನುಭೂತಿ ನೀಡುವ ಬದಲು ಅವಮಾನ ಮಾಡುತ್ತಾರೆ. ಉತ್ತರ ಪ್ರದೇಶದಲ್ಲಿ ಮಹಿಳೆಯರ ಭದ್ರತೆ ಹೇಗಿದೆ ಎಂಬುದಕ್ಕೆ ಉನ್ನಾವ್,ಹಾಥರಸ್, ಬದಾಯುಂ ಅತ್ಯಾಚಾರ ಪ್ರಕರಣಗಳೇ ಉದಾಹರಣೆ’ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.