ನವದೆಹಲಿ: ಕಾಶ್ಮೀರದ ಕೆಲವು ಭಾಗಗಳಲ್ಲಿ ನಡೆದುಕೊಂಡು ಹೋಗಬಾರದು ಎಂದು ಭಾರತ್ ಜೋಡೊ ಯಾತ್ರೆಯ ಸಾರಥಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಭದ್ರತಾ ಪಡೆಗಳು ಸೂಚಿಸಿವೆ ಎಂದು ಮೂಲಗಳನ್ನು ಉಲ್ಲೇಖಿಸಿ ‘ಎನ್ಡಿಟಿವಿ‘ ವರದಿ ಮಾಡಿದೆ.
‘ರಾಹುಲ್ ಗಾಂಧಿಯವರ ಸುರಕ್ಷತೆಗಾಗಿ ವಿಸ್ಕೃತವಾದ ಯೋಜನೆ ರೂಪಿಸಲಾಗಿದ್ದು, ಕಾಶ್ಮೀರದ ಕೆಲವು ಪ್ರದೇಶಗಳಲ್ಲಿ ನಡೆದು ಸಾಗುವುದಕ್ಕಿಂತ ಕಾರಿನಲ್ಲಿ ಪ್ರಯಾಣಿಸಿ ಎಂದು ಅವರಿಗೆ ಸೂಚನೆ ನೀಡಲಾಗಿದೆ‘ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾಗಿ ಎನ್ಡಿಟಿವಿ ವರದಿ ಮಾಡಿದೆ.
ರಾಹುಲ್ ಗಾಂಧಿ ಅವರು ರಾತ್ರಿ ತಂಗುವ ಪ್ರದೇಶದಲ್ಲಿ ಭದ್ರತೆ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಶ್ರೀನಗರದಲ್ಲಿ ಯಾತ್ರೆಯ ವೇಳೆ ರಾಹುಲ್ ಗಾಂಧಿ ಅವರೊಂದಿಗೆ ಬೆರಳೆಣಿಕೆಯಷ್ಟು ಜನ ಇರಲಿ ಎಂದು ಭದ್ರತಾ ಪಡೆಗಳು ಸೂಚಿಸಿವೆ.
ಸದ್ಯ ಇರುವ ಯೋಜನೆಯ ಪ್ರಕಾರ ಜನವರಿ 19 ರಂದು ಲಖನ್ಪುರ ಮಾರ್ಗವಾಗಿ ಯಾತ್ರೆ ಕಾಶ್ಮೀರಕ್ಕೆ ಪ್ರವೇಶಿಸಲಿದೆ. ಜನವರಿ 25 ಬನಿಹಾಲ್ನಲ್ಲಿ ತ್ರಿವರ್ಣ ಧ್ವಜ ಹಾರಿಸಲಿದ್ದಾರೆ. ಇದಾದ ಎರಡು ದಿನಗಳ ಬಳಿಕ ಅನಂತ್ನಾಗ್ ಮೂಲಕ ಯಾತ್ರೆ ಶ್ರೀನಗರಕ್ಕೆ ಪ್ರವೇಶ ಮಾಡಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.