ವಿಶ್ವಸಂಸ್ಥೆ: ಜಾಗತಿಕ ತಾಪಮಾನ ನಿಯಂತ್ರಣಕ್ಕಾಗಿ ತಮ್ಮ ರಾಜ್ಯದಲ್ಲಿ ಕೈಗೊಂಡಿರುವ ಸುಸ್ಥಿರ ಅಭಿವೃದ್ಧಿ ಕ್ರಮಗಳನ್ನು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ದುಂಡುಮೇಜಿನ ಸಭೆಯಲ್ಲಿಪ್ರಸ್ತುತಪಡಿಸಿದ್ದಾರೆ.
ವಿಶ್ವಸಂಸ್ಥೆಯ 75ನೇ ಸಾಮಾನ್ಯ ಸಭೆಯ ಭಾಗವಾಗಿವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿಯವರು ಆಯೋಜಿಸಿದ್ದ ವರ್ಚುವಲ್ ‘ಹವಾಮಾನ ಬದಲಾವಣೆ ದುಂಡು ಮೇಜಿನ ಸಭೆ’ಯಲ್ಲಿ ಜಾಗತಿಕ ತಾಪಮಾನವನ್ನು 1.5 ಸೆಂಟಿಗ್ರೇಡ್ಗೆ ನಿಯಂತ್ರಿಸುವುದಕ್ಕಾಗಿ ಬಿಹಾರದಲ್ಲಿ ಕೈಗೊಂಡಿರುವ ಹವಾಮಾನಾಧಾರಿತ ಕೃಷಿ ಮತ್ತು ಜಲಸಂರಕ್ಷಣೆ ಸೇರಿದಂತೆ ವಿವಿಧ ಸುಸ್ಥಿರ ಅಭಿವೃದ್ಧಿ ಪ್ರಯತ್ನಗಳನ್ನು ಅವರು ವಿವರಿಸಿದ್ದಾರೆ.ಈ ಸಭೆಯಲ್ಲಿ ಪಾಲ್ಗೊಂಡ ಭಾರತದ ಏಕೈಕ ಪ್ರತಿನಿಧಿ ನಿತೀಶ್ ಕುಮಾರ್.
‘ವಿಶ್ವದ ಶೇ 2ರಷ್ಟು ಜನಸಂಖ್ಯೆ ಹೊಂದಿರುವ ಬಿಹಾರ 2015ರ ಪ್ಯಾರಿಸ್ ಒಪ್ಪಂದವನ್ನು ಪರಿಪೂರ್ಣಗೊಳಿಸುವ ನಿಟ್ಟಿನಲ್ಲಿ ಮಹತ್ವದ ಪಾತ್ರವಹಿಸಲಿದೆ’ ಎಂದು ಪ್ರತಿಪಾದಿಸಿದ್ದಾರೆ.
ಬಿಹಾರದಲ್ಲಿ ಉಂಟಾಗುವ ಅಕಾಲಿಕ ಮಳೆ, ತೀವ್ರ ತಾಪಮಾನ, ಅಂತರ್ಜಲ ಕುಸಿತ, ಬರಗಾಲ ಮತ್ತು ಪ್ರವಾಹದಂತಹ ಹವಾಮಾನ ಬದಲಾವಣೆ ಪರಿಣಾಮಗಳನ್ನು ಗಮನಿಸಿ, ‘ಜಲ ಜೀವನ್ ಹರಿಯಾಲಿ ಅಭಿಯಾನ್’ ಯೋಜನೆ ರೂಪಿಸಲಾಗಿದೆ. ಅದರಡಿಜಲಸಂರಕ್ಷಣೆ ಮತ್ತು ಹಸಿರೀಕರಣದಂತಹ ಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದ್ದೇವೆ. ಇದರ ಸುತ್ತ ನಮ್ಮ ಅಭಿವೃದ್ಧಿಯ ಕಾರ್ಯತಂತ್ರವನ್ನು ರೂಪಿಸುತ್ತಿದ್ದೇವೆ ಎಂದು ಅವರು ಪೂರ್ವ ಮುದ್ರಿತ ವಿಡಿಯೊ ಸಂದೇಶದ ಮೂಲಕ ವಿವರಿಸಿದ್ದಾರೆ.
‘ಜಲಸಂರಕ್ಷಣೆ ಮತ್ತು ಭೂಮಿಗೆ ಹಸಿರು ಹೊದಿಸುವಂತಹ ಚಟುವಟಿಕೆಗಳಿಂದಮಾತ್ರ ಸಕಲ ಜೀವಿಗಳು ಭೂಮಿಯ ಮೇಲೆ ಬದುಕಲು ಸಾಧ್ಯ ಎಂಬುದು ನಮ್ಮ ಸರ್ಕಾರದ ನಂಬಿಕೆ’ ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.
‘ಹವಾಮಾನ ಆಧಾರಿತ ಕೃಷಿ, ಮೇಲ್ಮೈ ಮತ್ತು ಅಂತರ್ಜಲ ಸಂರಕ್ಷಣೆ, ಸೌರಶಕ್ತಿ ಅಳವಡಿಕೆ, ಪರಿಶುದ್ಧ ಇಂಧನ ಮತ್ತು ಜೀವವೈವಿಧ್ಯ ಸಂರಕ್ಷಣೆ ಸೇರಿದಂತೆ ಸುಸ್ಥಿರ ಅಭಿವೃದ್ಧಿಯ ಚಟುವಟಿಕೆಗಳನ್ನು ನಾವು ಅನುಷ್ಠಾನಗೊಳಿಸುತ್ತಿದ್ದೇವೆ’ ಎಂದು ವಿವರಿಸಿದ್ದಾರೆ.
ಅರಣ್ಯ ಪ್ರದೇಶದ ಹೊರಗೂ ಹಸಿರೀಕರಣ ಮಾಡಲು ಬಿಹಾರ ಸಮುದಾಯ ಆಧಾರಿತ ಚಟುವಟಿಕೆ ಅನುಷ್ಠಾನಗೊಳಿಸುತ್ತಿರುವುದನ್ನು ನಿತೀಶ್ ಕುಮಾರ್ ಒತ್ತಿ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.