
ಪ್ರಶಾಂತ್ ಕಿಶೋರ್
(ಪಿಟಿಐ ಚಿತ್ರ)
ಪಟ್ನಾ: ವಿಧಾನಸಭೆ ಚುನಾವಣಾ ಪೂರ್ವ ನೀಡಿದ ಭರವಸೆಯಂತೆ ಬಿಹಾರದಲ್ಲಿ ನಿತೀಶ್ ಕುಮಾರ್ ಅವರ ಸರ್ಕಾರವು 1.5 ಕೋಟಿ ಜನರಿಗೆ ತಲಾ ₹2 ಲಕ್ಷ ನೀಡಿದರೆ ರಾಜಕೀಯ ತೊರೆಯುವುದಾಗಿ ಜನ ಸುರಾಜ್ ಪಕ್ಷದ ನಾಯಕ ಪ್ರಶಾಂತ್ ಕಿಶೋರ್ ಇಂದು (ಮಂಗಳವಾರ) ಸವಾಲು ಹಾಕಿದ್ದಾರೆ.
'ಚುನಾವಣೆಗೂ ಮೊದಲು ಮಹಿಳೆಯರಿಗೆ ₹10 ಸಾವಿರ ನೀಡದಿರುತ್ತಿದ್ದರೆ ಜೆಡಿಯು 25 ಸ್ಥಾನಗಳಿಗೆ ಸೀಮಿತಗೊಳ್ಳುತ್ತಿತ್ತು' ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
'ರಾಜ್ಯ ವಿಧಾನಸಭಾ ಚುನಾವಣೆಗೂ ಮುನ್ನ ಪ್ರತಿ ಕ್ಷೇತ್ರದಲ್ಲಿ 60 ಸಾವಿರ ಫಲಾನುಭವಿಗಳಿಗೆ ₹10,000 ನೀಡದಿದ್ದರೆ ಮತ್ತು ಸ್ವ-ಉದ್ಯೋಗ ಉಪಕ್ರಮಗಳ ಅಡಿಯಲ್ಲಿ ರಾಜ್ಯಾದ್ಯಂತ 1.5 ಕೋಟಿ ಮಹಿಳೆಯರಿಗೆ ₹2 ಲಕ್ಷ ನೀಡುವ ವಾಗ್ದಾನ ನೀಡದಿದ್ದರೆ ಜೆಡಿಯು ಪಕ್ಷ ಹೀನಾಯ ಸೋಲು ಕಾಣುತ್ತಿತ್ತು' ಎಂದು ಅವರು ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಜನ ಸುರಾಜ್ ಪಕ್ಷವು ಪ್ರಾಮಾಣಿಕ ಯತ್ನವನ್ನು ನಡೆಸಿತು. ಆದರೆ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಯಿತು. ಸೋಲಿನ ಸಂಪೂರ್ಣ ಹೊಣೆಯನ್ನು ವಹಿಸುತ್ತೇನೆ' ಎಂದು ಹೇಳಿದ್ದಾರೆ.
'ಮತಗಳ್ಳತನ ಇಡೀ ದೇಶದಲ್ಲಿ ನಡೆಯುತ್ತಿದೆ. ವಿರೋಧ ಪಕ್ಷ ಈ ಕುರಿತು ಚರ್ಚೆ ನಡೆಸಿ ಅಗತ್ಯವಿದ್ದರೆ ಸುಪ್ರೀಂ ಕೋರ್ಟ್ಗೆ ಮನವಿ ಸಲ್ಲಿಸಬೇಕು' ಎಂದು ಅವರು ಒತ್ತಾಯಿಸಿದ್ದಾರೆ.
'ನಮಗೆ ಹಿನ್ನಡೆಯಾಗಿದೆ. ಆದರೆ ತಪ್ಪನ್ನು ತಿದ್ದಿಕೊಳ್ಳುತ್ತೇವೆ. ಮತ್ತಷ್ಟು ಪ್ರಬಲರಾಗಿ ಪುಟಿದೇಳುತ್ತೇವೆ' ಎಂದು ಭರವಸೆ ನೀಡಿದ್ದಾರೆ.
'ಜಾತಿ ಹಾಗೂ ಧರ್ಮದ ಆಧಾರದಲ್ಲಿ ಜನರನ್ನು ವಿಭಜಿಸಿದ ಎನ್ಡಿಎ, ಜನರಿಗೆ ಹಣ ನೀಡಿ ಮತ ಗಳಿಸಿದೆ. ಆದರೆ ಕನಿಷ್ಠ ಪಕ್ಷ ನಾನು ಭ್ರಷ್ಟ ಹಾಗೂ ವಿಭಜನೆಯ ರಾಜಕಾರಣ ಮಾಡಿಲ್ಲ' ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.