
ಹಾಜಿಪುರ (ಬಿಹಾರ): ‘ಬಿಹಾರದಲ್ಲಿ ಗೃಹ ಇಲಾಖೆಯನ್ನು ನಿತೀಶ್ ಕುಮಾರ್ ಅವರಿಂದ ಬಿಜೆಪಿ ಕಸಿದುಕೊಂಡಿದೆ. ಸಾಮ್ರಾಟ್ ಚೌಧರಿ ರಾಜ್ಯದ ಗೃಹ ಸಚಿವರಾದ ಬಳಿಕ ಬಿಹಾರ ಬುಲ್ಡೋಜರ್ ಆಡಳಿತದತ್ತ ಸಾಗುತ್ತಿದೆ’ ಎಂದು ಸಿಪಿಐ(ಎಂಎಲ್) ಲಿಬರೇಶನ್ ಪ್ರಧಾನ ಕಾರ್ಯದರ್ಶಿ ದೀಪಾಂಕರ್ ಭಟ್ಟಾಚಾರ್ಯ ಆರೋಪಿಸಿದರು.
ಸುಪೌಲ್ನಲ್ಲಿ ಚುನಾವಣಾ ಪ್ರಚಾರದ ಸಮಯದಲ್ಲಿ ನಿಧನರಾದ ಸಿಪಿಐ (ಎಂಎಲ್) ಲಿಬರೇಶನ್ ನಾಯಕ ವಿಶ್ವೇಶ್ವರ ಪ್ರಸಾದ್ ಯಾದವ್ ಅವರ ಸ್ಮರಣಾರ್ಥ ಹಾಜಿಪುರದಲ್ಲಿ ಭಾನುವಾರ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.
‘ಇನ್ನು ಮುಂದೆ ಉತ್ತರ ಪ್ರದೇಶದ ಮಾದರಿಯಲ್ಲಿ ಬುಲ್ಡೋಜರ್ ಆಡಳಿತ ಬರಲಿದೆ. ಕಾನೂನು ಇರುವುದಿಲ್ಲ. ಬುಲ್ಡೋಜರ್ ಆಡಳಿತದ ವಿರುದ್ಧ ನಮ್ಮ ಪಕ್ಷ ದೃಢವಾಗಿ ಹೋರಾಡುತ್ತದೆ’ ಎಂದು ಹೇಳಿದರು.
‘ಬಿಹಾರ ಅಪಾಯಕಾರಿ ಯುಗವನ್ನು ಪ್ರವೇಶಿಸಿದೆ. ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಭಾರಿ ಅಕ್ರಮಗಳು ನಡೆದಿವೆ. ಸುಮಾರು 70 ಲಕ್ಷ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ. 20 ಲಕ್ಷದಿಂದ 25 ಲಕ್ಷ ಹೊಸ ಹೆಸರುಗಳನ್ನು ಸೇರಿಸಲಾಗಿದೆ. ಇದು ಮತಗಟ್ಟೆ ಹಂತದಲ್ಲಿ ಮತದಾರರ ಸಮತೋಲನವನ್ನು ಬದಲಾಯಿಸಿದೆ’ ಎಂದು ಆರೋಪಿಸಿದರು.
ಈ ಹಿಂದೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಬಳಿ ಇದ್ದ ಗೃಹ ಖಾತೆಯನ್ನು ಈಗ ಬಿಜೆಪಿಯ ಸಾಮ್ರಾಟ್ ಚೌಧರಿ ಅವರಿಗೆ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.