ಪಟ್ನಾ: ಬಿಜೆಪಿ ನೇತೃತ್ವದ ಎನ್ಡಿಎ ಒಕ್ಕೂಟದಿಂದ ನಮ್ಮ ಪಕ್ಷ ಹೊರಬಂದಿರುವುದಾಗಿ ರಾಷ್ಟ್ರೀಯ ಲೋಕ ಜನಶಕ್ತಿ ಪಕ್ಷದ(ಆರ್ಎಲ್ಜೆಪಿ) ಪಕ್ಷದ ವರಿಷ್ಠ, ಮಾಜಿ ಕೇಂದ್ರ ಸಚಿವ ಪಶುಪತಿ ಕುಮಾರ್ ಪಾರಸ್ ಘೋಷಿಸಿದ್ದಾರೆ.
ತಮ್ಮ ದಿವಂಗತ ಸಹೋದರ ರಾಮ್ ವಿಲಾಸ್ ಪಾಸ್ವಾನ್ ಕಟ್ಟಿದ್ದ ಲೋಕ ಜನಶಕ್ತಿ ಪಕ್ಷದಿಂದ ಹೊರಬಂದು ಪಾರಸ್, 2021ರಲ್ಲಿ ಹೊಸ ಪಕ್ಷ ಕಟ್ಟಿದ್ದರು. ಅಣ್ಣ ಮಗ ಚಿರಾಗ್ ಪಾಸ್ವಾನ್ ನೇತೃತ್ವದ ಲೋಕ ಜನಶಕ್ತಿ ಪಕ್ಷ ಎನ್ಡಿಎಯಲ್ಲಿ ಗುರುತಿಸಿಕೊಂಡಿದೆ.
ರಾಮ್ ವಿಲಾಸ್ ಪಾಸ್ವಾನ್ ಅವರನ್ನು ಎರಡನೇ ಅಂಬೇಡ್ಕರ್ ಎಂದು ಬಣ್ಣಿಸಿರುವ ಅವರು, ಪಾಸ್ವಾನ್ ಅವರಿಗೆ ಭಾರತರತ್ನ ನೀಡಬೇಕೆಂದೂ ಒತ್ತಾಯಿಸಿದ್ದಾರೆ.
2014ರಿಂದ ನಾನು ಎನ್ಡಿಎಯಲ್ಲಿದ್ದೆ. ಇನ್ನುಮುಂದೆ, ನಮ್ಮ ಪಕ್ಷಕ್ಕೂ ಎನ್ಡಿಎಗೂ ಯಾವುದೇ ಸಂಬಂಧವಿಲ್ಲ ಎಂದು ಘೋಷಿಸುತ್ತಿದ್ದೇನೆ ಎಂದು ಪಾರಸ್ ಹೇಳಿದ್ದಾರೆ.
ಕಳೆದ ವರ್ಷ ಲೋಕಸಭೆ ಚುನಾವಣೆ ವೇಳೆಯಲ್ಲಿ ಲೋಕ ಜನಶಕ್ತಿ ಪಕ್ಷಕ್ಕೆ ಎನ್ಡಿಎ ಐದು ಟಿಕೆಟ್ ನೀಡಿದ್ದರಿಂದ ಬೇಸರಗೊಂಡಿದ್ದ ಪಾರಸ್, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಸ್ಪರ್ಧಿಸಿದ್ದ ಐದೂ ಕ್ಷೇತ್ರಗಳಲ್ಲೂ ಎಲ್ಜೆಪಿ(ಆರ್ವಿ) ಗೆಲುವು ದಾಖಲಿಸಿತ್ತು. ರಾಮ ವಿಲಾಸ್ ಪಾಸ್ವಾನ್ ಪ್ರತಿನಿಧಿಸುತ್ತಿದ್ದ, 2019ರಲ್ಲಿ ಪಾರಸ್ ಗೆದ್ದಿದ್ದ ಹಾಜಿಪುರ ಕ್ಷೇತ್ರದಲ್ಲಿ ಕಳೆದ ಬಾರಿ ಚಿರಾಗ್ ಪಾಸ್ವಾನ್ ಗೆಲುವು ಸಾಧಿಸಿದ್ದರು.
ಎನ್ಡಿಎ ಮೈತ್ರಿಯಿಂದ ಹೊರಬಂದಿದ್ದರೂ ರಾಷ್ಟ್ರೀಯ ಅಧ್ಯಕ್ಷ ಜೆ,ಪಿ. ನಡ್ಡಾ ಜೊತೆ ಮಾತುಕತೆ ನಡೆಸುವ ಮೂಲಕ ಬದಲಾವಣೆ ನಿರೀಕ್ಷಿಸಿದ್ದರು ಎಂದು ವರದಿ ತಿಳಿಸಿದೆ.
ಪಾರಸ್ ತಮ್ಮ ಪಕ್ಷದ ಕಚೇರಿ ಮಾಡಿಕೊಂಡಿದ್ದ ಸರ್ಕಾರಿ ಬಂಗಲೆಯನ್ನೂ ಸರ್ಕಾರ ಖಾಲಿ ಮಾಡಿಸಿ ಚಿರಾಗ್ ಪಾಸ್ವಾನ್ ಅವರಿಗೆ ನೀಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.