ADVERTISEMENT

ತ್ಯಾಗವಿರದೇ ಅಧಿಕಾರ ಬಯಸುವವರಿಗೆ ಪಕ್ಷದಲ್ಲಿ ಜಾಗವಿಲ್ಲ: ಬಂಗಾಳ ಬಿಜೆಪಿ ಅಧ್ಯಕ್ಷ

ಪಿಟಿಐ
Published 13 ಜೂನ್ 2021, 15:19 IST
Last Updated 13 ಜೂನ್ 2021, 15:19 IST
ದಿಲೀಪ್‌ ಘೋಷ್‌
ದಿಲೀಪ್‌ ಘೋಷ್‌    

ಕೋಲ್ಕತ್ತ: ಚುನಾವಣೆಗೆ ಮೊದಲು ಟಿಎಂಸಿಯಿಂದ ಬಿಜೆಪಿಗೆ ಬಂದು ಈಗ ಮತ್ತೆ ಟಿಎಂಸಿಗೆ ಹಿಂದಿರುಗಲು ಸಾಲುಗಟ್ಟಿ ನಿಂತಿರುವ ನಾಯಕರ ಕುರಿತು ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್‌ ಘೋಷ್‌ ಭಾನುವಾರ ಮಾತನಾಡಿದ್ದಾರೆ. ‘ತ್ಯಾಗ ಮಾಡದೇ ಅಧಿಕಾರ ಅನುಭವಿಸಲು ಬಯಸುವವರು ಪಕ್ಷ ತೊರೆಯಬಹುದು,’ ಎಂದು ಅವರು ತಿಳಿಸಿದ್ದಾರೆ.

ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದ ಮುಕುಲ್ ರಾಯ್ ಅವರು ಪಕ್ಷ ತೊರೆದಿರುವುದರಿಂದ ಹೆಚ್ಚಿನ ವ್ಯತ್ಯಾಸವೇನೂ ಆಗುವುದಿಲ್ಲ ಎಂದು ಘೋಷ್‌ ಶುಕ್ರವಾರ ಹೇಳಿದ್ದರು. ‘ಕೆಲವರು ಪಕ್ಷಗಳನ್ನು ಬದಲಾಯಿಸುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ,‘ ಎಂದು ಅವರು ಗೇಲಿ ಮಾಡಿದ್ದರು.

‘ಬಿಜೆಪಿಯಲ್ಲಿ ಉಳಿಯಬೇಕಾದರೆ ಯಾರೇ ಆದರೂ ತ್ಯಾಗ ಮಾಡಬೇಕಾಗುತ್ತದೆ. ಅಧಿಕಾರವನ್ನು ಆನಂದಿಸಲು ಬಯಸುವವರು ಬಿಜೆಪಿಯಲ್ಲಿ ಉಳಿಯಲು ಸಾಧ್ಯವಿಲ್ಲ. ನಾವು ಅವರನ್ನು ಉಳಿಸಿಕೊಳ್ಳುವುದಿಲ್ಲ‘ ಎಂದು ಅವರು ಬಂಗಾಳಿಯಲ್ಲಿ ಭಾನುವಾರ ಟ್ವೀಟ್ ಮಾಡಿದ್ದಾರೆ.

ADVERTISEMENT

‌ಬಂಗಾಳದಲ್ಲಿನ ಸೋಲಿಗೆ ಸಂಬಂಧಿಸಿದಂತೆ ಬಿಜೆಪಿಯೊಳಗೆ ಆರೋಪ–ಪ‍್ರತ್ಯಾರೋಪಗಳು ನಡೆಯುತ್ತಿವೆ. ಟಿಎಂಸಿಯಿಂದ ಕರೆತಂದ ನಾಯಕರಿಗೆ ಪಕ್ಷದಲ್ಲಿ ಹೆಚ್ಚಿನ ಪ್ರಾಶಸ್ತ್ಯ ನೀಡಲಾಯಿತು ಎಂಬ ಅಸಮಾಧಾನ ಬಿಜೆಪಿಯ ಮೂಲ, ಹಿರಿಯ ನಾಯಕರಲ್ಲಿ ಇದೆ.

ಇತ್ತೀಚೆಗೆ ಪಕ್ಷ ತೊರೆದ ಮುಕುಲ್‌ ರಾಯ್‌ ಅವರ ಕುರಿತು ಟ್ವೀಟ್‌ ಮಾಡಿರುವ ಪಕ್ಷದ ಹಿರಿಯ ನಾಯಕ ತಥಾಗತ ರಾಯ್‌, ‘ಟೋರ್ಜನ್‌ ಹಾರ್ಸ್‌ (ಮುಕುಲ್‌ ರಾಯ್‌) ಅನ್ನು ಪಕ್ಷಕ್ಕೆ ಆಹ್ವಾನಿಸಲಾಯಿತು. ಅವರಿಗೆ ರಾಷ್ಟ್ರೀಯ ನಾಯಕರ ಸಂಪರ್ಕ ಸಿಕ್ಕಿತು. ರಾಜ್ಯ ಬಿಜೆಪಿಯ ಹಿರಿಯೊರೊಂದಿಗೆ ಪಳಗಿ, ತಂತ್ರಗಳನ್ನು ಅವರು ತಿಳಿದುಕೊಂಡರು. ಪಕ್ಷದ ಆಂತರಿಕ ವಿಚಾರಗಳನ್ನು ತಿಳಿದುಕೊಂಡರು. ಈಗ ಮತ್ತೆ ಹಿಂತಿರುಗಿ ಮಮತಾ ಅವರಿಗೆ ಮಾಹಿತಿ ಸೋರಿಕೆ ಮಾಡಿದರು,‘ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.