ಪಟ್ನಾ: ಕ್ಷೇತ್ರ ಬದಲಾವಣೆಯಿಂದ ಅಸಮಾಧಾನಗೊಂಡಿರುವ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರುಬಿಹಾರದ ಬೇಗುಸರಾಯ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ನಿರಾಕರಿಸಿದ್ದಾರೆ. ಕ್ಷೇತ್ರ ಬದಲಾವಣೆ ಮಾಡುವ ಮುನ್ನ ತಮ್ಮ ಜತೆಗೆ ಸಮಾಲೋಚನೆ ನಡೆಸಿಲ್ಲಎಂಬುದು ಅವರ ಆಕ್ರೋಶಕ್ಕೆ ಕಾರಣ.
‘ಬಿಹಾರದ ಯಾವೊಬ್ಬ ಕೇಂದ್ರ ಸಚಿವರಿಗೂ ಕ್ಷೇತ್ರ ಬದಲಾವಣೆ ಆಗದಿರುವಾಗ, ನನ್ನ ಕ್ಷೇತ್ರವನ್ನು ಮಾತ್ರ ಏಕೆ ಬದಲಿಸಲಾಗಿದೆ’ ಎಂದು ಗಿರಿರಾಜ್ ಪ್ರಶ್ನಿಸಿದ್ದಾರೆ.ನವಾದಾ ಕ್ಷೇತ್ರ ಪ್ರತಿನಿಧಿಸುತ್ತಿರುವ ಅವರಿಗೆ ಬೇಗುಸರಾಯ್ ಟಿಕೆಟ್ ನೀಡಲಾಗಿದೆ. ದೆಹಲಿಯಲ್ಲಿ ಬೀಡುಬಿಟ್ಟಿರುವ ಅವರು, ಕ್ಷೇತ್ರ ಬದಲಾವಣೆಗೆ ಕಾರಣರಾಗಿರುವ ಪಕ್ಷದ ಇಬ್ಬರು ಮುಖಂಡರ ವಿರುದ್ಧ ವರಿಷ್ಠರಿಗೆ ದೂರು ನೀಡಿದ್ದಾರೆ. ಆದರೆ ಗಿರಿರಾಜ್ ಮನವೊಲಿಸುವ ಜವಾಬ್ದಾರಿಯನ್ನು ಪಕ್ಷದ ಐವರು ಹಿರಿಯ ಮುಖಂಡರಿಗೆ ವಹಿಸಲಾಗಿದೆ.
ಮೇಲ್ವರ್ಗದ ಭೂಮಿಹಾರ್ ಸಮುದಾಯಕ್ಕೆ ಸೇರಿರುವ ಗಿರಿರಾಜ್ ಅವರಿಗೆ ಸಿಪಿಐ ಅಭ್ಯರ್ಥಿ ಕನ್ಹಯ್ಯಾ ಕುಮಾರ್ ವಿರುದ್ಧ ಸ್ಪರ್ಧಿಸುವಂತೆ ಸೂಚಿಸಲಾಗಿದೆ.
‘2014ರ ಚುನಾವಣೆಯಲ್ಲಿ ಬೇಗುಸರಾಯ್ನಿಂದ ಸ್ಪರ್ಧಿಸಲು ನಾನು ಬಯಸಿದ್ದೆ. ಆದರೆ ನನ್ನ ಮನವೊಲಿಸಿ ನವಾದಾ ಕ್ಷೇತ್ರದ ಟಿಕೆಟ್ ನೀಡಲಾಗಿತ್ತು. ನವಾದಾ ಜನರಿಗಾಗಿ ನಾನು ಐದು ವರ್ಷ ಕೆಲಸ ಮಾಡಿದ್ದೇನೆ. ಇದೀಗ ಎಲ್ಜೆಪಿ ಅಭ್ಯರ್ಥಿ ನವಾದಾದಲ್ಲಿ ಸ್ಪರ್ಧಿಸಲಿರುವ ಕಾರಣ ನನಗೆ ಬೇಗುಸರಾಯ್ ಕ್ಷೇತ್ರಕ್ಕೆ ವಲಸೆ ಹೋಗುವಂತೆ ಸೂಚಿಸಲಾಗಿದೆ’ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.