ADVERTISEMENT

ಉತ್ತರ ಪ್ರದೇಶ ಕಳ್ಳಭಟ್ಟಿ ದುರಂತ ಪ್ರಕರಣ: ಪಕ್ಷದಿಂದ ಬಿಜೆಪಿ ಶಾಸಕ ವಜಾ

ಪಿಟಿಐ
Published 7 ಜೂನ್ 2021, 12:59 IST
Last Updated 7 ಜೂನ್ 2021, 12:59 IST
ಅಲಿಘಡದ ಕಳ್ಳಭಟ್ಟಿ ದುರಂತ ಪ್ರಕರಣದಲ್ಲಿ ಸಾವಿಗೀಡಾದ ವ್ಯಕ್ತಿಯೊಬ್ಬರ ಕುಟುಂಬದ ಸದಸ್ಯರು ರೋದಿಸುತ್ತಿರುವ ದೃಶ್ಯ –ಪಿಟಿಐ ಚಿತ್ರ
ಅಲಿಘಡದ ಕಳ್ಳಭಟ್ಟಿ ದುರಂತ ಪ್ರಕರಣದಲ್ಲಿ ಸಾವಿಗೀಡಾದ ವ್ಯಕ್ತಿಯೊಬ್ಬರ ಕುಟುಂಬದ ಸದಸ್ಯರು ರೋದಿಸುತ್ತಿರುವ ದೃಶ್ಯ –ಪಿಟಿಐ ಚಿತ್ರ   

ಅಲಿಗಡ: ಉತ್ತರಪ್ರದೇಶದ ಅಲಿಗಡ ಜಿಲ್ಲೆಯಲ್ಲಿ ನಡೆದ ಕಳ್ಳಭಟ್ಟಿ ದುರಂತ ಪ್ರಕರಣದ ಪ್ರಮುಖ ಆರೋಪಿ ಬಿಜೆಪಿಯ ಶಾಸಕ ರಿಷಿ ಶರ್ಮಾ ಅವರನ್ನು ಸೋಮವಾರ ಬಿಜೆಪಿಯು ಪಕ್ಷದಿಂದ ಹೊರಹಾಕಿದೆ.

‘ರಿಷಿ ಶರ್ಮಾ ಅವರ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ರದ್ದುಗೊಳಿಸಲಾಗಿದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರಿಷಿಪಾಲ್ ಪಾಲ್‌ ಸಿಂಗ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಪ್ರಕರಣದ ಪ್ರಮುಖ ಆರೋಪಿ ರಿಷಿ ಶರ್ಮಾ ಅವರನ್ನು ಪೊಲೀಸರು ಭಾನುವಾರ ಬಂಧಿಸಿದ್ದು, ಶರ್ಮಾ ಸೇರಿದಂತೆ ಇತರ ಐವರು ಮುಖ್ಯ ಆರೋಪಿಗಳ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ ಮತ್ತು ಗೂಂಡಾ ಕಾಯ್ದೆ ಅಡಿ ಪ್ರಕರಣ ದಾಖಲಿಸಲು ಸಿದ್ಧತೆ ನಡೆಸಿದ್ದಾರೆ’ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಕಲಾನಿಧಿ ನೈಥಾನಿ ತಿಳಿಸಿದ್ದಾರೆ.

ADVERTISEMENT

‘ಆರೋಪಿಗಳ ವಿಚಾರಣೆ ನಡೆಯುತ್ತಿದ್ದು, ಮದ್ಯ ಮಾಫಿಯಾದ ಪೂರ್ಣ ಜಾಲವನ್ನು ಬಹಿರಂಗಪಡಿಸುವ ನಿರೀಕ್ಷೆ ಇದೆ’ ಎಂದೂ ಪೊಲೀಸ್ ಮೂಲಗಳು ಹೇಳಿವೆ.

ಸಾಧುಗಳ ನಡುವೆ ಅಡಗಿದ್ದ ರಿಷಿ ಶರ್ಮಾ!

ಮೇ 27ರ ರಾತ್ರಿ ಕಳ್ಳಭಟ್ಟಿ ಸೇವಿಸಿ 35 ಮಂದಿ ಸಾವಿಗೀಡಾದ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಆರೋಪಿ ರಿಷಿ ಶರ್ಮಾ ಪೊಲೀಸರ ಕೈಗೆ ಸಿಕ್ಕಿಬೀಳುವ ಭಯದಿಂದ ನಾಪತ್ತೆಯಾಗಿದ್ದರು.

ಆದರೆ, ಆಪ್ತರೊಬ್ಬರ ವಿಡಿಯೊದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದ ಶರ್ಮಾ ಅವರನ್ನು ಪತ್ತೆ ಹಚ್ಚುವಲ್ಲಿ ಉತ್ತರ ಪ್ರದೇಶ ಪೊಲೀಸರು ಸಫಲರಾಗಿದ್ದಾರೆ. ಹಾಪುರದ ಸಮೀಪದ ಘರ್‌ಮುಕ್ತೇಶ್ವರ್ ಆಶ್ರಮದ ಸಾಧುಗಳ ಗುಂಪಿನ ನಡುವೆ ಅಡಗಿದ್ದ ರಿಷಿ ಶರ್ಮಾ ಅಲ್ಲಿಂದಲೂ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಆದರೆ, ಖಚಿತ ಮಾಹಿತಿಯ ಮೇರೆಗೆ ಅಲಿಗಡ–ಬುಲಂದ್‌ಶಹರ್ ಗಡಿ ಪ್ರದೇಶದಲ್ಲಿ ಶರ್ಮಾ ಅವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾದರು.

ಹಿಮಾಚಲ ಪ್ರದೇಶದ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಶರ್ಮಾ ಅವರ ಸಹಚರರು ಇದ್ದ ಸ್ಥಳಗಳಲ್ಲಿ 9 ದಿನಗಳ ಕಾಲ ಶೋಧ ಕಾರ್ಯ ಕೈಗೊಳ್ಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.