ನವದೆಹಲಿ:ಐದು ರಾಜ್ಯಗಳ ಚುನಾವಣಾ ಫಲಿತಾಂಶದ ಬೆಳವಣಿಗೆಗಳು ಗೊತ್ತಾಗುತ್ತಿದ್ದಂತೆ ಬಿಜೆಪಿಯ ಕೇಂದ್ರ ಕಚೇರಿ ಬಿಕೋ ಎನ್ನುತ್ತಿತ್ತು. ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರ ವಿಜಯೋತ್ಸವ, ಹರ್ಷೋದ್ಘಾರಗಳು ಮುಗಿಲು ಮುಟ್ಟಿದವು.
ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಬರಬಹುದು ಎಂದು ಊಹಿಸಿಕೊಂಡು ದೀನ್ ದಯಾಳ್ ಮಾರ್ಗದಲ್ಲಿರುವ ಬಿಜೆಪಿ ಕೇಂದ್ರ ಕಚೇರಿ ಹತ್ತಿರ ಬಿಗಿ ಬಂದೋಬಸ್ತ್ ಮಾಡಿದ್ದಪೊಲೀಸರು, ಅಲ್ಲಲ್ಲಿ ಬ್ಯಾರಿಕೇಡ್ ಸಹ ಹಾಕಿದ್ದರು. ಆದರೆ, ಫಲಿತಾಂಶದ ಬೆಳವಣಿಗೆಗಳು ಪ್ರಕಟವಾಗುತ್ತಿದ್ದಂತೆ ಕಚೇರಿಯತ್ತ ಯಾರೂ ಸುಳಿಯಲಿಲ್ಲ.
ಅಕ್ಬರ್ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರು ಪರಸ್ಪರ ಗುಲಾಲು ಹಚ್ಚಿಕೊಂಡು ಕುಣಿದು ಕುಪ್ಪಳಿಸಿದರು. ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
‘ಭಾರತದ ಮುಂದಿನ ಪ್ರಧಾನಿ ರಾಹುಲ್’ ಎಂದು ಬರೆದ ಬ್ಯಾನರ್ ಕಟ್ಟಿ,ಕಾಂಗ್ರೆಸ್ ಧ್ವಜ ಹಿಡಿದು ಘೋಷಣೆ ಕೂಗಿದರು.
ಪಂಜಾಬ್ ರಾಜ್ಯದ ಸಚಿವ ನವಜೋತ್ ಸಿಂಗ್ ಸಿಧು, ಪ್ರಿಯಾಂಕಾ ಚತುರ್ವೇದಿ ಸೇರಿದಂತೆ ಹಿರಿಯ ನಾಯಕರು ವಿಜಯೋತ್ಸವದಲ್ಲಿ ಭಾಗವಹಿಸಿದ್ದರು.
‘ಎಲ್ಲರೂ ಒಗ್ಗಟ್ಟಿನಿಂದ ಮಾಡಿದ ಶ್ರಮಕ್ಕೆ ಸಿಕ್ಕ ಫಲ ಇದಾಗಿದೆ. ರಾಹುಲ್ ಅವರು ಬಿಕ್ಕಟ್ಟಿನ ಸಮಯದಲ್ಲಿ ದೊಡ್ಡ ಪಾತ್ರವನ್ನು ಪ್ರದರ್ಶಿಸಿದ್ದಾರೆ. ಕಾರ್ಯಕರ್ತರಿಗೆ ಅವರು ಸ್ಫೂರ್ತಿಯಾಗಿದ್ದಾರೆ’ ಎಂದು ಸಿಧು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.