ADVERTISEMENT

ಬಿಜೆಪಿ–‘ಇಂಡಿಯಾ’ ನಡುವೆ ‘ಗದ್ದಲದ ವಾರ’?

ಸಂಸತ್ ಅಧಿವೇಶನ: ಮಸೂದೆಯಾಗಿ ವಿವಾದಾತ್ಮಕ ಸುಗ್ರೀವಾಜ್ಞೆ, ಅವಿಶ್ವಾಸ ಗೊತ್ತುವಳಿ ನಿರ್ಣಯ ಚರ್ಚೆಗೆ?

​ಪ್ರಜಾವಾಣಿ ವಾರ್ತೆ
Published 30 ಜುಲೈ 2023, 23:30 IST
Last Updated 30 ಜುಲೈ 2023, 23:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ    

ನವದೆಹಲಿ: ವಿವಾದಾತ್ಮಕ ಸುಗ್ರೀವಾಜ್ಞೆಯನ್ನು ಮಸೂದೆಯಾಗಿ ಅಂಗೀಕರಿಸುವ ಪ್ರಸ್ತಾವ ಹಾಗೂ ಮೋದಿ ಸರ್ಕಾರದ ವಿರುದ್ಧ ಮಂಡನೆಯಾಗಿರುವ ಅವಿಶ್ವಾಸ ಗೊತ್ತುವಳಿಯು ಸಂಸತ್ತಿನ ಉಭಯ ಸದನಗಳಲ್ಲೂ ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷಗಳ ‘ಇಂಡಿಯಾ’ ನಡುವೆ ‘ಗದ್ದಲದ ವಾರ’ಕ್ಕೆ ಕಾರಣವಾಗುವ ನಿರೀಕ್ಷೆಯಿದೆ.

ಮಣಿಪುರಕ್ಕೆ ‘ಇಂಡಿಯಾ’ ಒಕ್ಕೂಟದ 21 ಸಂಸದರು ಶನಿವಾರವಷ್ಟೇ ಭೇಟಿ ನೀಡಿದ್ದು, ಅಲ್ಲಿನ ಜನಾಂಗೀಯ ಸಂಘರ್ಷದ ವಿಷಯವೂ ಮತ್ತಷ್ಟು ಪ್ರತಿರೋಧಕ್ಕೆ ಇಂಬು ನೀಡಲಿದೆ.

ಸರ್ಕಾರದ ವಿರುದ್ಧ ಅಧಿವೇಶನದಲ್ಲಿ ಒಗ್ಗಟ್ಟಾಗಿ ಕಾರ್ಯತಂತ್ರ ರೂಪಿಸಲು ಸೋಮವಾರ ಬೆಳಿಗ್ಗೆ 9.30ಕ್ಕೆ ಪ್ರತಿಪಕ್ಷಗಳ ‘ಇಂಡಿಯಾ’ ಶಾಸಕಾಂಗ ಪಕ್ಷದ ನಾಯಕರ ಸಭೆ ಕರೆದಿದೆ. ಇಲ್ಲಿ ಒಕ್ಕೂಟವೂ ತನ್ನ ಕಾರ್ಯತಂತ್ರ ಹೆಣೆಯಲಿದೆ. ಮಣಿಪುರದ ವಾಸ್ತವವೂ ಚರ್ಚೆಯಾಗಲಿದೆ.

ADVERTISEMENT

ಮಣಿಪುರದ ಜನಾಂಗೀಯ ಸಂಘರ್ಷದ ಕುರಿತಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಂಸತ್ತಿನಲ್ಲಿ ಹೇಳಿಕೆ ನೀಡಬೇಕು ಎಂಬ ತಮ್ಮ ಪಟ್ಟನ್ನು ವಿರೋಧ ಪಕ್ಷಗಳು ಮತ್ತಷ್ಟು ಬಿಗಿಗೊಳಿಸಿವೆ. ಚರ್ಚೆಗೂ ಆಗ್ರಹಿಸಿವೆ. ಆದರೆ ಇದನ್ನು ಒಪ್ಪದ ಸರ್ಕಾರ, ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರತಿಕ್ರಿಯಿಸಲಿದ್ದಾರೆ ಎಂದಿದೆ.

ಅವಿಶ್ವಾಸ ಗೊತ್ತುವಳಿ ನಿರ್ಣಯವನ್ನು ತಕ್ಷಣವೇ ಕೈಗೆತ್ತಿಕೊಳ್ಳಬೇಕು ಎಂದು ಪ್ರತಿಪಕ್ಷಗಳು ಆಗ್ರಹಿಸಿವೆ. ಹಿಂದಿನ ಬುಧವಾರವೇ ನೋಟಿಸ್‌ ಸಹ ನೀಡಿವೆ. ಈ ಪ್ರಕ್ರಿಯೆ ಪೂರ್ಣಗೊಳ್ಳುವ ತನಕವೂ ಯಾವುದೇ ಮಸೂದೆ ಅಂಗೀಕರಿಸಬಾರದು ಎಂದು ಪಟ್ಟು ಹಿಡಿದಿದ್ದರೂ; ಸರ್ಕಾರ ಆರು ಮಸೂದೆ ಅಂಗೀಕರಿಸಿದೆ.  

ಲೋಕಸಭೆಯ ಶನಿವಾರದ ಕಲಾಪ ಪಟ್ಟಿಯಲ್ಲಿ ‘ರಾಷ್ಟ್ರ ರಾಜಧಾನಿ ದೆಹಲಿ ಪ್ರದೇಶ ಸರ್ಕಾರ (ತಿದ್ದುಪಡಿ) ಮಸೂದೆ’ಯ ಮಂಡನೆಯೂ ಸೇರ್ಪಡೆಯಾಗಿತ್ತು. ಸೋಮವಾರದ ಕಲಾಪದಲ್ಲಿ ಇದನ್ನು ಕೈಬಿಡಲಾಗಿದ್ದು, ಸರ್ಕಾರ ಯಾವ ಕ್ಷಣದಲ್ಲಾದರೂ ಪರಿಷ್ಕೃತ ಪಟ್ಟಿಗೆ ಇದನ್ನು ಸೇರಿಸಬಹುದಾಗಿದೆ.

ಲೋಕಸಭೆ, ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳ ಒಕ್ಕೂಟಕ್ಕೆ ಬಹುಮತವಿಲ್ಲ. ಆದರೂ ‘ಇಂಡಿಯಾ’ ಪಕ್ಷಗಳು ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದು ಮತ ಯಾಚಿಸಲಿವೆ. ರಾಜ್ಯಸಭೆಯಲ್ಲಿ ಈ ಸಂಖ್ಯೆ 100 ದಾಟಿದರೆ; ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದಾಗ ಇದು ಪರಿಣಾಮ ಬೀರಬಲ್ಲದು ಎಂದು ಪ್ರತಿಪಕ್ಷಗಳ ಮೂಲಗಳು ತಿಳಿಸಿವೆ.

ರಾಜ್ಯಸಭೆಯಲ್ಲಿ ಸರ್ಕಾರದ ಪರ 121 ಮತಗಳಿದ್ದರೆ, ‘ಇಂಡಿಯಾ’ ಬಳಿ 103 ಮತಗಳಿವೆ. ಬಿಜೆಡಿ, ಬಿಎಸ್‌ಪಿ, ಜಾತ್ಯತೀತ ಜನತಾದಳ ಯಾವ ಗುಂಪಿಗೂ ಬೆಂಬಲ ಸೂಚಿಸಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.