ADVERTISEMENT

ಕೇಜ್ರಿವಾಲ್‌ಗೆ ಅಬಕಾರಿ ಗುತ್ತಿಗೆದಾರರ ನಂಟು: ಬಿಜೆಪಿ ಆರೋಪ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2022, 15:43 IST
Last Updated 20 ಸೆಪ್ಟೆಂಬರ್ 2022, 15:43 IST
ಗುಜರಾತ್‌ನ ವಡೋದರಾ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್‌ ಅವರನ್ನು ಪಕ್ಷದ ಕಾರ್ಯಕರ್ತರು ಸ್ವಾಗತಿಸಿದರು – ಪಿಟಿಐ ಚಿತ್ರ
ಗುಜರಾತ್‌ನ ವಡೋದರಾ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್‌ ಅವರನ್ನು ಪಕ್ಷದ ಕಾರ್ಯಕರ್ತರು ಸ್ವಾಗತಿಸಿದರು – ಪಿಟಿಐ ಚಿತ್ರ   

ನವದೆಹಲಿ(ಪಿಟಿಐ):ದೆಹಲಿ ಸರ್ಕಾರದ ನೂತನ ಅಬಕಾರಿ ನೀತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಸಂಬಂಧ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ಮೇಲೆ ಬಿಜೆಪಿ ವಾಗ್ದಾಳಿ ಮಾಡಿದೆ. ‘ನೂತನ ಅಬಕಾರಿ ನೀತಿವಾಪಸ್‌ ಪಡೆದು, ಎಎಪಿ ನಾಯಕನ ಹತ್ತಿರದ ವ್ಯಕ್ತಿಗೆ ಅಬಕಾರಿ ಗುತ್ತಿಗೆ ನೀಡಲಾಗಿದೆ’ ಎಂದು ಹೊಸ ಆರೋಪ ಮಾಡಿದೆ.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ವಕ್ತಾರ ಗೌರವ್‌ ಭಾಟಿಯಾ ಅವರು, ಅರವಿಂದ ಕೇಜ್ರಿವಾಲ್ ಮತ್ತು ಎಎಪಿ ಶಾಸಕ ಸೌರಬ್ ಭಾರದ್ವಜ್‌ ಅವರ ಜತೆಗೆ ಅಬಕಾರಿ ಗುತ್ತಿಗೆದಾರ ಕರಮ್‌ಜೀತ್‌ ಸಿಂಗ್‌ ಲಂಬಾ ಅವರಿರುವ ಛಾಯಾಚಿತ್ರವನ್ನು ತೋರಿಸಿ, ಲಂಬಾ ಅವರು ಮದ್ಯ ವಿತರಕ ಪಾಲುದಾರನಷ್ಟೇ ಅಲ್ಲ, ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಎಎಪಿ ಟಿಕೆಟ್‌ ಮೇಲೆ ಸ್ಪರ್ಧಿಸಿದ್ದ ಅಭ್ಯರ್ಥಿ ಕೂಡ ಹೌದು ಎಂದು ತಿಳಿಸಿದರು.

ದೆಹಲಿ ಸರ್ಕಾರದಿಂದ ಮುಖ್ಯಮಂತ್ರಿ ಕೇಜ್ರಿವಾಲ್‌ ಮತ್ತು ಅವರ ಪಕ್ಷಕ್ಕೆ ಹತ್ತಿರದಲ್ಲಿರುವವರಿಗೆ ಭ್ರಷ್ಟಾಚಾರವನ್ನು ಉಚಿತ ಯೋಜನೆಯಾಗಿ ಏಕೆ ವಿತರಿಸಲಾಗುತ್ತಿದೆ ಎನ್ನುವುದನ್ನು ಕೇಜ್ರಿವಾಲ್ ಅವರೇ ವಿವರಿಸಬೇಕು.ಅಬಕಾರಿ ಗುತ್ತಿಗೆ ನೀಡುವಲ್ಲಿ ದೆಹಲಿ ಸರ್ಕಾರ ನಿಯಮಗಳನ್ನು ಪಾಲಿಸಿಲ್ಲ ಮತ್ತು ಪಾರದರ್ಶಕತೆ ಕಾಯ್ದುಕೊಂಡಿಲ್ಲ. ನೂತನ ಅಬಕಾರಿ ನೀತಿ ಜಾರಿಗೊಳಿಸಿ, ನಂತರ ಹಿಂತೆಗೆದುಕೊಂಡ ಎಎಪಿ ಸರ್ಕಾರದ ನಿರ್ಧಾರದ ಫಲಾನುಭವಿಗಳಲ್ಲಿ ಯುನಿವರ್ಸಲ್ ಡಿಸ್ಟ್ರಿಬ್ಯೂಟರ್ಸ್‌ನ ಲಂಬಾ ಪ್ರಮುಖರು’ ಎಂದು ಭಾಟಿಯಾ ಆರೋಪಿಸಿರು.

ADVERTISEMENT

ಬಿಜೆಪಿಯ ಈ ಆರೋಪಕ್ಕೆ ಲಂಬಾ ಅವರಿಂದ ತಕ್ಷಣದ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.

‘ಗುಜರಾತ್‌ನಲ್ಲಿ ಅಧಿಕಾರಕ್ಕೆ ಬಂದರೆ ಹಳೆ ಪಿಂಚಣಿ ಜಾರಿ’

ವಡೋದರಾ (ಪಿಟಿಐ): ಗುಜರಾತ್‌ನಲ್ಲಿ ಇದೇ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವು ಅಧಿಕಾರಕ್ಕೆ ಬಂದರೆ ಪಂಜಾಬ್‌ ರೀತಿಯಲ್ಲೇಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆ ಜಾರಿಗೆ ತರುವುದಾಗಿ ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್‌ ಮಂಗಳವಾರ ಭರವಸೆ ನೀಡಿದರು.

ಎಎಪಿ ಆಡಳಿತದ ಪಂಜಾಬ್‌ ರಾಜ್ಯದಲ್ಲಿ ಹಳೆಯ ಪಿಂಚಣಿ ಯೋಜನೆ ಅನುಷ್ಠಾನ ಪರಿಗಣಿಸುವ ಆದೇಶವನ್ನು ಮುಖ್ಯಮಂತ್ರಿ ಭಗವಂತ್‌ ಮಾನ್‌ ಅವರು ಹೊರಡಿಸಿದ್ದಾರೆ ಎಂದರು.

ಹಳೆಯ ಪಿಂಚಣಿ ಯೋಜನೆಯ ಅನುಷ್ಠಾನಕ್ಕೆ ಒತ್ತಾಯಿಸಿಗುಜರಾತ್‌ನಲ್ಲಿ ಸರ್ಕಾರಿ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಬೀದಿಗಿಳಿದಿದ್ದಾರೆ. ಈ ಹೋರಾಟ ಮುಂದುವರಿಯಲಿ.ಎಎಪಿ ಸರ್ಕಾರ ರಚಿಸಿದರೆ ಹಳೆಯ ಪಿಂಚಣಿ ಯೋಜನೆ ಅನುಷ್ಠಾನಕ್ಕೆ ತರುವುದು ಖಾತ್ರಿ ಎಂದು ಕೇಜ್ರಿವಾಲ್ ಸುದ್ದಿಗಾರರಿಗೆ ತಿಳಿಸಿದರು.

ಮೋದಿ ಬೆಂಬಲಿಗರಿಂದ ನಿಂದನೆ: ಕೇಜ್ರಿವಾಲ್‌ ಆರೋಪ

ವಡೋದರಾ (ಪಿಟಿಐ): ‘ವಡೋದರಾ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಘೋಷಣೆ ಕೂಗುತ್ತಾ ಗುಂಪಿನಲ್ಲಿ ಬಂದ ಜನರು ನನಗೆ ತಡೆಯೊಡ್ಡಿ, ನಿಂದಿಸಿದರು’ ಎಂದು ಎಎಪಿ ರಾಷ್ಟ್ರೀಯ ಸಂಚಾಲಕ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಮಂಗಳವಾರ ಆರೋಪಿಸಿದರು.

ಗುಜರಾತ್‌ಗೆ ರಾಹುಲ್‌ ಗಾಂಧಿ ಭೇಟಿ ನೀಡಿದಾಗ ಅವರ ವಿರುದ್ಧ ಬಿಜೆಪಿ ಬೆಂಬಲಿಗರು ಎಂದಿಗೂ ಘೋಷಣೆ ಕೂಗಲಿಲ್ಲ. ನನ್ನನ್ನು ಮತ್ತು ನಮ್ಮ ಪಕ್ಷ ನಿಂದಿಸಲು ಬಿಜೆಪಿ ಹಾಗೂ ಕಾಂಗ್ರೆಸ್‌ ಎರಡೂ ಒಟ್ಟಾಗಿವೆ ಎಂದು ಕೇಜ್ರಿವಾಲ್‌ ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವಡೋದರಾ ವಿಮಾನ ನಿಲ್ದಾಣದಲ್ಲಿ ಇಳಿದಾಗ 30ರಿಂದ 40 ಜನರಿದ್ದ ಗುಂಪು ನನಗೆ ಎದುರಾಗಿ ‘ಮೋದಿ, ಮೋದಿ, ಮೋದಿ’ ಎಂದು ಘೋಷಣೆ ಕೂಗಿದರು. ಗುಜರಾತ್‌ನಲ್ಲಿ ಬಿಜೆಪಿ ಪರಿಸ್ಥಿತಿ ಭಾರಿ ತೊಂದರೆಯಲ್ಲಿದೆ’ ಎಂದು ಹೇಳಿದರು.

ಡಿಸೆಂಬರ್‌ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಸಮಾಜದ ವಿವಿಧ ವರ್ಗಗಳನ್ನು ತಲುಪುವ ಅಭಿಯಾನದ ಭಾಗವಾಗಿ ಟೌನ್ ಹಾಲ್ ಸಭೆ ಉದ್ದೇಶಿಸಿ ಇದೇ ವೇಳೆ ಕೇಜ್ರಿವಾಲ್‌ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.