ನವದೆಹಲಿ: ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಅಂಗವಾಗಿ ಭಾರತೀಯ ಜನತಾ ಪಕ್ಷವು (ಬಿಜೆಪಿ) ವಿಶೇಷ ದೇಣಿಗೆ ಅಭಿಯಾನವನ್ನು ಆರಂಭಿಸಿದೆ. 'ದೇಶಕ್ಕೆಮೊದಲ ಆದ್ಯತೆ ನೀಡುವ ಪಕ್ಷವನ್ನುಸದೃಢಗೊಳಿಸಲು' ದೇಣಿಗೆ ನೀಡುವಂತೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಕರೆ ನೀಡಿದ್ದಾರೆ.
ಈ ಸಂಬಂಧ ಟ್ವಿಟರ್ನಲ್ಲಿ ಬರೆದುಕೊಂಡಿರುವ ನಡ್ಡಾ, 'ಅಟಲ್ ಜೀ ಅವರ ಜನ್ಮದಿನವಾದ ಡಿಸೆಂಬರ್ 25ರಿಂದ, ದೀನ್ ದಯಾಳ್ ಜೀ ಅವರ ಪುಣ್ಯತಿಥಿ 2022ರ ಫೆಬ್ರವರಿ 11ರವರೆಗೆ ಬಿಜೆಪಿಯು ವಿಶೇಷ ದೇಣಿಗೆ ಅಭಿಯಾನಕ್ಕೆ ಚಾಲನೆ ನೀಡುತ್ತಿದೆ.ನಿಮ್ಮ ಬೆಂಬಲವು, ಯಾವಾಗಲೂ ದೇಶಕ್ಕೆ ಮೊದಲ ಆದ್ಯತೆ ನೀಡುವ ಪಕ್ಷವನ್ನು ಸದೃಢಗೊಳಿಸಲಿದೆ' ಎಂದು ತಿಳಿಸಿದ್ದಾರೆ.
ದೇಣಿಗೆ ನೀಡಿದ ರಶೀದಿಯನ್ನೂ ಹಂಚಿಕೊಂಡಿರುವ ಅವರು, ಬಿಜೆಪಿಯನ್ನು ಬಲಪಡಿಸುವ ಸಲುವಾಗಿ ನನ್ನದೇ ಆದ ವಿನಯಪೂರ್ವಕ ಪಾಲನ್ನು ನಮೋ ಆ್ಯಪ್ ಮೂಲಕ ನೀಡಿದ್ದೇನೆ. ರೆಫರಲ್ ಕೋಡ್ ಬಳಸಿ ನೀವೂ, ನಿಮ್ಮ ಸ್ನೇಹಿತರು ಮತ್ತು ಕುಟುಂಬದರೊಂದಿಗೆ ಈ ಜನಾಂದೋಲನದಲ್ಲಿ ಪಾಲ್ಗೊಳ್ಳಬಹುದು ಮತ್ತು ಸ್ವಾರ್ಥ ರಹಿತವಾಗಿ ದೇಶ ಸೇವೆ ಮುಂದುವರಿಸಲುಬಿಜೆಪಿಯನ್ನು ಬಲಪಡಿಸಬಹುದು' ಎಂದು ತಿಳಿಸಿದ್ದಾರೆ.
'ಪ್ರಪಂಚದ ಅತಿದೊಡ್ಡ ರಾಷ್ಟ್ರೀಯವಾದಿ ಆಂದೋಲನವನ್ನು ಪ್ರಬಲಗೊಳಿಸಲು ಜನರ ಆಶೀರ್ವಾದವನ್ನು ಎದುರು ನೋಡುತ್ತಿದ್ದೇನೆ' ಎಂದೂ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೂ ಈಗಾಗಲೇ ದೇಣಿಗೆ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.