ಎನ್ಐಎ
(ಪಿಟಿಐ ಸಂಗ್ರಹ ಚಿತ್ರ)
ಪಾಲಕ್ಕಾಡ್ : ರ್ಯಾಪರ್ ಮತ್ತು ಗೀತರಚನೆಕಾರ ವೇದನ್ (ಹಿರಣದಾಸ್ ಮುರಳಿ) ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ ಪಾಲಕ್ಕಾಡ್ನ ಬಿಜೆಪಿ ನಾಯಕಿ ವಿ.ಎಸ್ ಮಿನಿಮೋಳ್ ಅವರು ದೂರು ನೀಡಿದ್ದಾರೆ.
ವೇದನ್ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅವರು ಕೇಂದ್ರ ಗೃಹ ಸಚಿವಾಲಯ ಮತ್ತು ಎನ್ಐಎಗೆ ಲಿಖಿತ ಮನವಿ ಸಲ್ಲಿಸಿದ್ದಾರೆ.
ವೇದನ್ ಅವರು ಸಂಗೀತದ ಮೂಲಕ ಜಾತಿ ಆಧರಿತ ವಿಭಜನೆಗೆ ಉತ್ತೇಜನ ನೀಡುತ್ತಿದ್ದಾರೆ ಎಂದೂ ಅವರು ಆರೋಪಿಸಿದ್ದಾರೆ.
ಮಿನಿಮೋಳ್ ಅವರು ಪಾಲಕ್ಕಾಡ್ನ ಪುರಸಭೆ ಸದಸ್ಯೆ ಮತ್ತು ಅಭಿವೃದ್ಧಿ ಸಮಿತಿಯ ಅಧ್ಯಕ್ಷರೂ ಆಗಿದ್ದಾರೆ.
ಐದು ವರ್ಷಗಳ ಹಿಂದೆ ಬಿಡುಗಡೆಯಾದ ‘ವಾಯ್ಸ್ ಆಫ್ ವಾಯ್ಸ್ಲೆಸ್’ ಶೀರ್ಷಿಕೆಯ ಹಾಡಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಗೌರವ ತೋರಿದ್ದಾರೆ ಮತ್ತು ಅವಹೇಳನ ಮಾಡಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ವೇದನ್ ಅವರು ಮಾದಕದ್ರವ್ಯ ಸೇವನೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿದ್ದರೂ ದೊಡ್ಡ ಮಟ್ಟದಲ್ಲಿ ಸಂಗೀತ ಕಛೇರಿಗಳನ್ನು ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರು ಹಿಂಸಾಚಾರ ಮತ್ತು ದ್ವೇಷವನ್ನು ಹುರಿದುಂಬಿಸುತ್ತಿದ್ದಾರೆ. ವೇದನ್ ಅವರ ವಿರುದ್ಧ ದಾಖಲಾಗಿರುವ ಹಲವು ಪ್ರಕರಣಗಳ ಸಂಬಂಧ ಎನ್ಐಎ ತನಿಖೆ ನಡೆಯಬೇಕು ಎಂದು ಅವರು ಕೋರಿದ್ದಾರೆ.
‘ದಲಿತ ವಿರೋಧಿ ಅಜೆಂಡಾ’:
ಸಂಘ ಪರಿವಾರದ ದಲಿತ ವಿರೋಧಿ ಅಜೆಂಡವೇ ವೇದನ್ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಲು ಕಾರಣ ಎಂದು ಸಿಪಿಎಂ ಮತ್ತು ಕಾಂಗ್ರೆಸ್ ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.