ADVERTISEMENT

ಮಣಿಪುರ: ಬಿಜೆಪಿ ಮುಖಂಡನ ಹತ್ಯೆ, ವ್ಯಕ್ತಿ ಬಂಧನ

ಪಿಟಿಐ
Published 24 ಜನವರಿ 2023, 14:07 IST
Last Updated 24 ಜನವರಿ 2023, 14:07 IST
   

ಇಂಪಾಲ್‌: ‘ಮಣಿಪುರ ಬಿಜೆಪಿ ಘಟಕದ ಮಾಜಿ ಸೈನಿಕರ ವಿಭಾಗದ ಸಂಚಾಲಕ ಲೈಶರ್ಮಾ ರಾಮೇಶ್ವರ್‌ ಸಿಂಗ್‌ ಅವರನ್ನು ತೌಂಬಾಲ್‌ ಜಿಲ್ಲೆಯಲ್ಲಿ ಮಂಗಳವಾರ ಹತ್ಯೆ ಮಾಡಲಾಗಿದೆ. ಈ ಸಂಬಂಧ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದರು.

‘ಸಿಂಗ್‌ ಅವರನ್ನು, ಅವರ ನಿವಾಸದ ಗೇಟಿನ ಬಳಿ ಬೆಳಿಗ್ಗೆ ಹತ್ಯೆ ಮಾಡಲಾಗಿದೆ. ನಂಬರ್‌ ಪ್ಲೇಟ್‌ ಇಲ್ಲದ ಕಾರಿನಲ್ಲಿ ಬಂದ ಕೆಲ ವ್ಯಕ್ತಿಗಳು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. 50 ವರ್ಷದ ಸಿಂಗ್‌ ಅವರ ಹೃದಯ ಭಾಗಕ್ಕೆ ಗುಂಡು ಬಿದ್ದಿತ್ತು. ತಕ್ಷಣವೇ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಸ್ಪತ್ರೆಯಲ್ಲಿಯೇ ಅವರು ನಿಧನರಾದರು’ ಎಂದು ತೌಂಬಾಲ್‌ನ ಪೊಲೀಸ್‌ ವರಿಷ್ಠಾಧಿಕಾರಿ ಹೋಬಿಜಂ ಜೊಗೇಶ್ವಚಂದ್ರ ವಿವರಿಸಿದರು.

‘ಕಾರು ಚಲಾಯಿಸುತ್ತಿದ್ದ ನೊರೆಮ್‌ ರಿಕಿ ಪಾಂಟಿಂಗ್‌ ಸಿಂಗ್‌ ಎಂಬುವವರನ್ನು ಘಟನೆ ನಡೆದ ಗಂಟೆಗಳ ಬಳಿಕ ಬಂಧಿಸಲಾಗಿದೆ. ಹತ್ಯೆಯ ಪ್ರಮುಖ ಆರೋಪಿ ಅಯೇಕ್‌ಪಂ ಕೆಶೋರ್ಜಿತ್‌ ಅವರನ್ನು ಬಂಧಿಸುವ ಕಾರ್ಯ ಪ್ರಗತಿಯಲ್ಲಿದೆ’ ಎಂದರು. ಆದರೆ, ಹತ್ಯೆಯ ಹಿಂದಿನ ಉದ್ದೇಶವನ್ನು ಪೊಲೀಸ್‌ ವರಿಷ್ಠಾಧಿಕಾರಿ ಬಹಿರಂಗಪಡಿಸಲಿಲ್ಲ.

ADVERTISEMENT

ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಚಿದಾನಂದ ಸಿಂಗ್‌ ಅವರು ಘಟನೆ ಕುರಿತು ಪ್ರತಿಕ್ರಿಯಿಸಿ, ‘ಇಂಥ ಹೇಡಿತನದ ಕೃತ್ಯವನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಕೃತ್ಯ ಎಸಗಿದವರನ್ನು ತಕ್ಷಣವೇ ಬಂಧಿಸಬೇಕು ಹಾಗೂ ತಕ್ಕ ಶಿಕ್ಷೆ ವಿಧಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.