ADVERTISEMENT

ಯೋಗಿ ಪ್ರಮಾಣವಚನಕ್ಕೆ ಹಾಜರಾಗಲು ಪೂಜೆ, ಪಕ್ಷದ ಧ್ವಜ ಕಡ್ಡಾಯಗೊಳಿಸಿದ ಬಿಜೆಪಿ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2022, 14:13 IST
Last Updated 21 ಮಾರ್ಚ್ 2022, 14:13 IST
ಯೋಗಿ ಆದಿತ್ಯನಾಥ್ - ಪಿಟಿಐ ಚಿತ್ರ
ಯೋಗಿ ಆದಿತ್ಯನಾಥ್ - ಪಿಟಿಐ ಚಿತ್ರ   

ಲಖನೌ: ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಎರಡನೇ ಅವಧಿಗೆ ಯೋಗಿ ಆದಿತ್ಯನಾಥ್ ಅವರು ಮಾ.25ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಅಂದು ಸಂಜೆ 4 ಗಂಟೆಗೆ ರಾಜ್ಯ ರಾಜಧಾನಿ ಲಖನೌನಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಇಕಾನ ಕ್ರೀಡಾಂಗಣದಲ್ಲಿ ಪ್ರಮಾಣವಚನ ಕಾರ್ಯಕ್ರಮ ನಿಗದಿಯಾಗಿದೆ.

ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಬರುವ ಎಲ್ಲ ಕಾರ್ಯಕರ್ತರು ದೇಗುಲಗಳಲ್ಲಿ ಪೂಜೆ ನೆರವೇರಿಸಿ, ವಾಹನಗಳ ಮೇಲೆ ಪಕ್ಷದ ಧ್ವಜ ಹಾರಿಸಿಕೊಂಡೇ ಬರಬೇಕು ಎಂದು ಬಿಜೆಪಿ ಸೂಚಿಸಿದೆ.

‘ಕಾರ್ಯಕರ್ತರು ಸ್ಥಳೀಯ ದೇಗುಲಗಳಲ್ಲಿ ಬೆಳಿಗ್ಗೆ 8–10 ಗಂಟೆಯ ವೇಳೆಗೆ ಪೂಜೆ ಸಲ್ಲಿಸಬೇಕು. ಬಳಿಕ ಪಕ್ಷದ ಧ್ವಜ ಇರುವ ವಾಹನಗಳಲ್ಲೇ ಸಮಾರಂಭ ನಡೆಯುವ ಸ್ಥಳಕ್ಕೆ ಬರಬೇಕು’ ಎಂದು ಪಕ್ಷದ ಜಿಲ್ಲಾ ಘಟಕಗಳನ್ನು ಉದ್ದೇಶಿಸಿ ಬಿಡುಗಡೆ ಮಾಡಲಾಗಿರುವ ಪ್ರಕಟಣೆಯಲ್ಲಿ ಬಿಜೆಪಿ ಸೂಚಿಸಿದೆ.

ಬರಹಗಾರರು, ವೃತ್ತಿಪರರು, ವೈದ್ಯರು, ಎಂಜಿನಿಯರ್‌ಗಳು, ಸಂತರು ಹಾಗೂ ಧಾರ್ಮಿಕ ಮುಖಂಡರಿಗೆ ಸಮಾರಂಭಕ್ಕೆ ಹಾಜರಾಗಲು ಆಹ್ವಾನ ನೀಡುವಂತೆಯೂ ಪ್ರಕಟಣೆಯಲ್ಲಿ ಸೂಚಿಸಲಾಗಿದೆ.

403 ವಿಧಾನಸಭಾ ಕ್ಷೇತ್ರಗಳಿಂದಲೂ ತಲಾ ಇಬ್ಬರು ಕಾರ್ಯಕರ್ತರಿಗೆ ಸಮಾರಂಭದಲ್ಲಿ ಭಾಗವಹಿಸಲು ಅವಕಾಶ ನೀಡಬೇಕು ಎಂದೂ ಪ್ರಕಟಣೆಯಲ್ಲಿ ಹೇಳಲಾಗಿದೆ.

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಸಮಾರಂಭದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.

ಪಂಚಾಯಿತಿ ಅಧ್ಯಕ್ಷರು, ವಿವಿಧ ಪಾಲಿಕೆಗಳ ಮೇಯರ್‌ಗಳೂ ಸಮಾರಂಭಕ್ಕೆ ಹಾಜರಾಗಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.