ನವದೆಹಲಿ: ಮುಂದಿನ ಲೋಕಸಭಾ ಚುನಾವಣೆಗೆ ಪ್ರಣಾಳಿಕೆ ಸಿದ್ಧಪಡಿಸಲು ಜನರಿಂದ ವ್ಯಾಪಕವಾಗಿ ಸಲಹೆಗಳನ್ನು ಪಡೆಯಲು ಬಿಜೆಪಿ ಮುಂದಾಗಿದೆ.
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಭಾನುವಾರ ಪ್ರಣಾಳಿಕೆ ಸಮಿತಿ ಸಭೆ ನಡೆದಿದೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಪ್ರಧಾನ ಕಾರ್ಯದರ್ಶಿ ರಾಮ್ಲಾಲ್, ಹಿರಿಯ ಮುಖಂಡರಾದ ರಾಮಮಾಧವ್, ಹರ್ಷ
ವರ್ಧನ್, ಭೂಪೇಂದ್ರ ಯಾದವ್, ಮುಕ್ತಾರ್ ಅಬ್ಬಾಸ್ ನಖ್ವಿ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದಾರೆ.
‘ಬಿಜೆಪಿ ಮುಖಂಡರು ವಿವಿಧ ಕ್ಷೇತ್ರಗಳ ಜನರ ಜತೆಗೆ ನೇರ ಸಂವಹನ ನಡೆಸಲಿದ್ದಾರೆ. ಈ ಜನರ ಅಭಿಪ್ರಾಯಗಳು ಪಕ್ಷದ ಪ್ರಣಾಳಿಕೆಯಲ್ಲಿ (ಸಂಕಲ್ಪಪತ್ರ 2019) ಬಿಂಬಿತವಾಗಲಿವೆ. ವಿವಿಧ ಕ್ಷೇತ್ರಗಳ ಜನರು ಸದಸ್ಯರಾಗಿರುವ 15 ಉಪ ಸಮಿತಿಗಳನ್ನು ರಚಿಸಲು ನಿರ್ಧರಿಸಲಾಗಿದೆ’ ಎಂದು ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ಹಿಂದೆಲ್ಲ, ಪಕ್ಷದ ಕೆಲವೇ ಮುಖಂಡರು ಜತೆಯಾಗಿ ಪ್ರಣಾಳಿಕೆ ತಯಾರಿಸುತ್ತಿದ್ದರು. ಆದರೆ, ಇತ್ತೀಚಿನ ವರ್ಷಗಳಲ್ಲಿ ಪ್ರಣಾಳಿಕೆಯು ಪ್ರಚಾರ ಕಾರ್ಯತಂತ್ರದ ಭಾಗವಾಗಿಬಿಟ್ಟಿದೆ. ಪ್ರಣಾಳಿಕೆಗಾಗಿ ನಡೆಸುವ ಸಮಾಲೋಚನೆಗಳು ಕೂಡ ಪಕ್ಷದ ಮುಖಂಡರಿಗೆ ಜನರ ಜತೆಗೆ ಸಂವಹನ ಸಾಧಿಸಲು ಅವಕಾಶ ನೀಡುತ್ತವೆ.
ಬಿಜೆಪಿ ಪ್ರಣಾಳಿಕೆ ಸಮಿತಿಯಲ್ಲಿ ಕೇಂದ್ರ ಸಚಿವರಾದ ಅರುಣ್ ಜೇಟ್ಲಿ, ರವಿಶಂಕರ್ ಪ್ರಸಾದ್, ನಿರ್ಮಲಾ ಸೀತಾರಾಮನ್, ಥಾವರ್ಚಂದ್ ಗೆಹ್ಲೋಟ್, ಪೀಯೂಷ್ ಗೋಯಲ್ ಮತ್ತು ಮುಕ್ತಾರ್ ಅಬ್ಬಾಸ್ ನಖ್ವಿ ಇದ್ದಾರೆ.
ಮಧ್ಯ ಪ್ರದೇಶ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಬಿಹಾರ ಉಪ ಮುಖ್ಯಮಂತ್ರಿ ಸುಶಿಲ್ ಮೋದಿ, ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಮತ್ತು ಲೋಕಸಭಾ ಸದಸ್ಯೆ ಮೀನಾಕ್ಷಿ ಲೇಖಿ ಅವರನ್ನೂ ಸಮಿತಿಗೆ ಸೇರಿಸಿಕೊಳ್ಳಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.