ನವದೆಹಲಿ: ಕಾಂಗ್ರೆಸ್ ಪಕ್ಷವು ಪಾಕಿಸ್ತಾನಕ್ಕೆ ನಿರಂತರವಾಗಿ ‘ಆಮ್ಲಜನಕ’ ಒದಗಿಸುತ್ತಿದೆ ಎಂದು ಬಿಜೆಪಿ ಶನಿವಾರ ಆರೋಪಿಸಿದೆ.
2019ರ ಪುಲ್ವಾಮಾ ದಾಳಿ ನಂತರ ಬಾಲಾಕೋಟ್ ಮೇಲೆ ನಡೆಸಿದ ವೈಮಾನಿಕ ದಾಳಿಯ ಸತ್ಯಾಸತ್ಯತೆಯನ್ನು ಕಾಂಗ್ರೆಸ್ ನಾಯಕ ಚರಣ್ಜಿತ್ ಸಿಂಗ್ ಚನ್ನಿ ಅವರು ಪ್ರಶ್ನಿಸಿದ್ದನ್ನು ಉಲ್ಲೇಖಿಸಿ ವಾಗ್ದಾಳಿ ನಡೆಸಿದೆ.
ಬಿಜೆಪಿಯ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ ಅವರು, ‘ಮೇಲ್ನೋಟಕ್ಕೆ ಅದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ), ಆದರೆ ಆಂತರ್ಯದಲ್ಲಿ ‘ಪಾಕಿಸ್ತಾನ ಕಾರ್ಯಕಾರಿ ಸಮಿತಿ’ಯಂತೆ ವರ್ತಿಸುತ್ತಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
ಕಾಂಗ್ರೆಸ್ ಪಕ್ಷದ ತುಂಬೆಲ್ಲಾ ಪಾಕ್ ಬೆಂಬಲಿಗರು ತುಂಬಿದ್ದಾರೆ. ಅವರು ಭಾರತದ ಹಿತಾಸಕ್ತಿಗೆ ವಿರುದ್ಧವಾದ ಹೇಳಿಕೆ ನೀಡುತ್ತಾರೆ ಮತ್ತು ಪಹಲ್ಗಾಮ್ ದಾಳಿ ವಿಚಾರದಲ್ಲಿ ಗೆರೆ ದಾಟದಂತೆ ತಿಳಿಸಿದ ಪಕ್ಷವನ್ನೂ ಲೇವಡಿ ಮಾಡುತ್ತಾರೆ ಎಂದು ಹರಿಹಾಯ್ದರು.
ಪಾಕಿಸ್ತಾನಕ್ಕೆ ಪಾಠ ಕಲಿಸಲು ಕೇಂದ್ರ ಸರ್ಕಾರವು ದಿಟ್ಟತನದಿಂದ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಶುಕ್ರವಾರ ನಿರ್ಣಯ ಕೈಗೊಂಡಿದೆ. ಈ ಬೆನ್ನಲ್ಲೇ ಚೆನ್ನಿ ಅವರು ಪತ್ರಿಕಾಗೋಷ್ಠಿಯಲ್ಲಿ ಬಾಲಾಕೋಟ್ ಮೇಲಿನ ದಾಳಿಯ ಸತ್ಯಾಸತ್ಯತೆಯನ್ನು ಪ್ರಶ್ನಿಸಿದ್ದಾರೆ ಎಂದು ಪಾತ್ರಾ ಹೇಳಿದರು.
ಚೆನ್ನಿ ಅವರು ಪುಲ್ವಾಮಾ ದಾಳಿಯನ್ನು ಉಲ್ಲೇಖಿಸಿ, ಚುನಾವಣೆ ಸಮೀಪದಲ್ಲಿದ್ದಾಗ 40 ಭಾರತೀಯ ಸೈನಿಕರನ್ನು ಹತ್ಯೆಗೈಯಲಾಯಿತು. ಸರ್ಕಾರ ಇದನ್ನು ಚುನಾವಣೆಗೆ ಬಳಸಿಕೊಂಡಿತು. ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದಾಗಿ ಸರ್ಕಾರ ಹೇಳಿಕೊಂಡಿತು. ಆದರೆ ವಾಯುದಾಳಿ ನಡೆಸಿದ ಕುರುಹುಗಳೇ ಇಲ್ಲ ಎಂದು ಹೇಳಿದ್ದರು.
ಪಾಕ್ ಹೊಗಳಲು ಯತ್ನ:
ಅಖಿಲೇಶ್ ಯಾದವ್ ಅವರಂಥ ವಿರೋಧ ಪಕ್ಷಗಳ ನಾಯಕರು ಪಾಕಿಸ್ತಾನದ ಸೆನೆಟರ್ಗಳಂತೆ ಕೇಂದ್ರ ಸರ್ಕಾರದ ನಿಲುವನ್ನು ಪ್ರಶ್ನಿಸುತ್ತಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಈ ತಂಡವನ್ನು ಸೇರಿಕೊಂಡು ನೆರೆಯ ದೇಶವನ್ನು ಹೊಗಳಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ಪಹಲ್ಗಾಮ್ ದಾಳಿ ಬಗ್ಗೆ ಕಾಂಗ್ರೆಸ್ ಪಕ್ಷದ ಅಧಿಕೃತ ಘೋಷಣೆಗಳು ಮತ್ತು ಪಕ್ಷದ ಸದಸ್ಯರ ಹೇಳಿಕೆಗಳ ನಡುವಣ ಅಂತರವನ್ನು ಉಲ್ಲೇಖಿಸಿ ವಾಗ್ದಾಳಿ ನಡೆಸಿದರು.
ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತಿತರರ ಹೇಳಿಕೆಗಳನ್ನು ಉಲ್ಲೇಖಿಸಿ, ಅವರು ಪಾಕ್ ಮೇಲೆ ಯುದ್ಧ ಅಗತ್ಯವೇ ಎಂದು ಪ್ರಶ್ನಿಸಿದ್ದಾರೆ ಮತ್ತು ಉಗ್ರರು ನಿಜಕ್ಕೂ ಧರ್ಮ ಕೇಳಿ ದಾಳಿ ನಡೆಸಿದ್ದಾರೆಯೇ ಎಂದು ಕೇಳಿದ್ದಾರೆ. ಹೀಗಾಗಿ ಕಾಂಗ್ರೆಸ್ ಪಕ್ಷದ ಅಧಿಕೃತ ನಿಲುವಿನ ಪ್ರಾಮಾಣಿಕತೆಯ ಬಗ್ಗೆ ಸಂಶಯ ಮೂಡುತ್ತದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.