ADVERTISEMENT

ಪೌರತ್ವ ಕಾಯ್ದೆ: ಎನ್‌ಡಿಎಯಲ್ಲಿ ಅತೃಪ್ತಿ

ಪೌರತ್ವ (ತಿದ್ದುಪಡಿ) ಕಾಯ್ದೆ: ಮೇಘಾಲಯದಲ್ಲಿ ಮೊಬೈಲ್ ಇಂಟರ್‌ನೆಟ್ ಸೇವೆ ಸ್ಥಗಿತ

ಶೆಮಿಜ್‌ ಜಾಯ್‌
Published 15 ಡಿಸೆಂಬರ್ 2019, 19:57 IST
Last Updated 15 ಡಿಸೆಂಬರ್ 2019, 19:57 IST
ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ಅಸ್ಸಾಂನ ನಟಿ ಬರ್ಸಾ ರಾಣಿ ಹಾಗೂ ಇತರರು ಗುವಾಹಟಿಯಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು
ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ಅಸ್ಸಾಂನ ನಟಿ ಬರ್ಸಾ ರಾಣಿ ಹಾಗೂ ಇತರರು ಗುವಾಹಟಿಯಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು   

ನವದೆಹಲಿ: ಪೌರತ್ವ (ತಿದ್ದುಪಡಿ) ಕಾಯ್ದೆಗೆ ಸಂಬಂಧಿಸಿ ಎನ್‌ಡಿಎಯೊಳಗೆ ಭಿನ್ನಮತ ಕಾಣಿಸಿಕೊಂಡಿದೆ. ಕಾಯ್ದೆ ಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲು ಅಸ್ಸಾಂ ಗಣ ಪರಿಷತ್‌ (ಎಜಿಪಿ) ನಿರ್ಧರಿಸಿದೆ. ರಾಷ್ಟ್ರೀಯ ಪೌರತ್ವ ನೋಂದಣಿಯನ್ನು (ಎನ್‌ಆರ್‌ಸಿ) ದೇಶದಾದ್ಯಂತ ಜಾರಿ ಮಾಡುವುದನ್ನು ವಿರೋಧಿಸುವುದಾಗಿ ಜೆಡಿಯು ಸ್ಪಷ್ಟಪಡಿಸಿದೆ.

ಎಜಿಪಿ ಮತ್ತು ಜೆಡಿಯು ಕಾಯ್ದೆಗೆ ಸಂಬಂಧಿಸಿ ತಳೆದಿರುವ ನಿಲುವನ್ನು ಬದಲಾಯಿಸಬೇಕು ಎಂದು ಆ ಪಕ್ಷಗಳ ಕೆಲವು ಮುಖಂಡರು ಬಲವಾಗಿ
ಪ್ರತಿಪಾದಿಸುತ್ತಿದ್ದಾರೆ. ಕಾಯ್ದೆಗೆ ಬೆಂಬಲ ನೀಡಿದ್ದನ್ನು ಜೆಡಿಯು ಮುಖಂಡ ಪ್ರಶಾಂತ್‌ ಕಿಶೋರ್‌ ವಿರೋಧಿಸಿದ್ದಾರೆ.

ಎನ್‌ಡಿಎಯ ಪಕ್ಷಗಳನ್ನು ಬಿಜೆಪಿ ನಡೆಸಿಕೊಳ್ಳುತ್ತಿರುವ ರೀತಿಯ ಬಗ್ಗೆ ಈ ಹಿಂದೆಯೂ ಆಕ್ಷೇಪ ಕೇಳಿ ಬಂದಿತ್ತು. ಎನ್‌ಡಿಎಯಲ್ಲಿ ಸಮನ್ವಯ ಸಮಿತಿ ಇರಬೇಕು ಎಂದು ಸಂಸತ್ತಿನ ಚಳಿಗಾಲದ ಅಧಿವೇಶನದ ಆರಂಭಕ್ಕೆ ಮುನ್ನ ಎಲ್‌ಜೆಪಿ ಹೇಳಿತ್ತು. ಇದಕ್ಕೆ ಅಕಾಲಿ ದಳ ಮತ್ತು ಆಗ ಎನ್‌ಡಿಎಯಲ್ಲಿಯೇ ಇದ್ದ ಶಿವಸೇನಾ ಬೆಂಬಲ ನೀಡಿದ್ದವು. ಪೌರತ್ವ (ತಿದ್ದುಪಡಿ) ಕಾಯ್ದೆಯ ವ್ಯಾಪ್ತಿಯಲ್ಲಿ ಮುಸ್ಲಿಮರನ್ನೂ ಸೇರಿಸಬೇಕು ಎಂಬ ಆಗ್ರಹವನ್ನು ಅಕಾಲಿ ದಳ ಮುಂದಿಟ್ಟಿತ್ತು.

ADVERTISEMENT

ಕಾಯ್ದೆಯನ್ನು ಎಜಿಪಿ ಮೊದಲು ವಿರೋಧಿಸಿತ್ತು. ಬಿಜೆಪಿ ನೇತೃತ್ವದ ಅಸ್ಸಾಂ ಸರ್ಕಾರದಿಂದ ಹೊರಗೆ ಬಂದಿತ್ತು. ಬಳಿಕ, ತಮ್ಮ ಕಳವಳಕ್ಕೆ ಸರ್ಕಾರ ಪರಿಹಾರ ಸೂಚಿಸಿದೆ ಎಂದು ಹೇಳಿ ಸಂಸತ್ತಿನಲ್ಲಿ ಮಸೂದೆಯನ್ನು ಬೆಂಬಲಿಸಿತ್ತು. ಆದರೆ, ಪಕ್ಷದ ಮುಖ್ಯಸ್ಥ ಅತುಲ್‌ ಬೋರಾ ಅವರ ನಿಲುವನ್ನು ಪ್ರಫುಲ್ಲ ಕುಮಾರ್‌ ಮಹಾಂತ ಅವರು ವಿರೋಧಿಸಿದ್ದಾರೆ. ಬೋರಾ ಅವರ ನಿಲುವನ್ನು ವಿರೋಧಿಸಿ ಪಕ್ಷದ ಹಲವು ಮುಖಂಡರು ರಾಜೀನಾಮೆ ನೀಡಿದ್ದಾರೆ.

ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್‌ ನಿಲುವಿನ ವಿರುದ್ಧ ಪಕ್ಷದಲ್ಲಿ ಅತೃಪ್ತಿ ಮೂಡಿದೆ. ಹಾಗಾಗಿಯೇ, ಎನ್‌ಆರ್‌ಸಿಯನ್ನು ಬೆಂಬಲಿಸದಿರಲು ಜೆಡಿಯು ನಿರ್ಧರಿಸಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.