ಲಖನೌ: ಉತ್ತರಪ್ರದೇಶದ ಫರೂಖಬಾದ್ ಜಿಲ್ಲೆಯಲ್ಲಿ ದಲಿತ ಇಬ್ಬರು ಬಾಲಕಿಯರಿಬ್ಬರ ಶವಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿವೆ.
‘ಭಗವತಿಪುರ ಗ್ರಾಮದಲ್ಲಿನ ಮಾವಿನ ಮರದಲ್ಲಿ ಬಾಲಕಿಯರ ಶವಗಳು ಪತ್ತೆಯಾಗಿದ್ದವು. 15ರಿಂದ 17 ವಯಸ್ಸಿನ ಬಾಲಕಿಯರು ಗೆಳತಿಯರಾಗಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಸೋಮವಾರ ರಾತ್ರಿ ಸ್ಥಳೀಯ ದೇವಸ್ಥಾನವೊಂದರಲ್ಲಿ ನಡೆಯುತ್ತಿದ್ದ ಕೃಷ್ಣ ಜನ್ಮಾಷ್ಟಮಿ ಆಚರಣೆಗೆ ತೆರಳಿದ್ದ ಬಾಲಕಿಯರು ಮನೆಗೆ ವಾಪಾಸಾಗಿರಲಿಲ್ಲ. ಕುಟುಂಬಸ್ಥರು ಹುಡುಕಾಟ ನಡೆಸಿದರೂ ಅವರ ಸುಳಿವು ಪತ್ತೆಯಾಗಿರಲಿಲ್ಲ. ಮಂಗಳವಾರ ಗ್ರಾಮಸ್ಥರೊಬ್ಬರಿಗೆ ಅವರ ಶವಗಳು ಕಂಡುಬಂದಿವೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಮೇಲ್ನೋಟಕ್ಕೆ ಇದು ಆತ್ಮಹತ್ಯೆಯಂತೆ ಕಂಡುಬರುತ್ತಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಖಚಿತವಾಗಿ ತಿಳಿಸಲಾಗುವುದು’ ಎಂದು ಪೊಲೀಸ್ ಅಧಿಕಾರಿಗಳು ಹೆಳಿದ್ದಾರೆ.
‘ಶವಗಳ ಬಳಿ ಯುವಕನೊಬ್ಬನ ಮೊಬೈಲ್ ಮತ್ತು ಮೃತಪಟ್ಟಿರುವ ಒಬ್ಬ ಬಾಲಕಿಯ ಜೇಬಿನಲ್ಲಿ ಸಿಮ್ ಕಾರ್ಡ್ ಪತ್ತೆಯಾಗಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ಬಾಲಕಿಯರನ್ನು ಕೊಲೆ ಮಾಡಿ, ಬಳಿಕ ಅವರ ಮೃತದೇಹಗಳನ್ನು ಮರಕ್ಕೆ ನೇತುಹಾಕಲಾಗಿದೆ’ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.