ನವದೆಹಲಿ: ಶಂಕಿತ ಕೋವಿಡ್ ರೋಗಿಗಳು ಮೃತಪಟ್ಟರೆ, ಅವರ ಶವಗಳನ್ನು ಸಂಬಂಧಿಕರಿಗೆ ತಕ್ಷಣವೇ ಹಸ್ತಾಂತರಿಸಬೇಕು. ತಪಾಸಣಾ ವರದಿ ಬರುವವರೆಗೆ ಕಾಯುವ ಅಗತ್ಯ ಇಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ.
ಆದರೆ ಅಂತ್ಯಕ್ರಿಯೆಯು ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳ ಪ್ರಕಾರವೇ ನಡೆಯಬೇಕು ಎಂದು ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದು ಸೂಚನೆ ನೀಡಿದೆ.
ಕೋವಿಡ್ ಪರೀಕ್ಷಾ ವರದಿಗಳು ತಡವಾಗಿ ಬರುತ್ತಿದ್ದು, ಮೃತದೇಹಗಳನ್ನು ಸಂಬಂಧಿಕರಿಗೆ ನೀಡಲು ಆಸ್ಪತ್ರೆಗಳು ವಿಳಂಬ ಮಾಡುತ್ತಿವೆ ಎಂಬ ವರದಿಗಳನ್ನು ಆಧರಿಸಿ ಸಚಿವಾಲಯ ಈ ಆದೇಶ ಹೊರಡಿಸಿದೆ.
‘ಮೃತದೇಹಗಳ ವಿಲೇವಾರಿ ಕುರಿತಂತೆ ಸಚಿವಾಲಯದ ವೆಬ್ಸೈಟ್ನಲ್ಲಿರುವ ಮಾರ್ಗಸೂಚಿಗಳನ್ನು ಪಾಲಿಸಬೇಕು. ಅಂತ್ಯಕ್ರಿಯೆ ನಡೆಸುವವರು ಪಿಪಿಇ ಕಿಟ್ ಧರಿಸಿರಬೇಕು. ಅಂತ್ಯಕ್ರಿಯೆ ನಡೆದ ಬಳಿಕ ತಪಾಸಣಾ ವರದಿಯಲ್ಲಿ ಕೋವಿಡ್ ಇರುವುದು ದೃಢಪಟ್ಟಲ್ಲಿ, ರೋಗಿಯ ಸಂಪರ್ಕಿತರ ಪಟ್ಟಿ ತಯಾರಿಸುವ ಹಾಗೂ ಅವರನ್ನು ಪತ್ತೆಹಚ್ಚುವ ಕೆಲಸವನ್ನು ತಕ್ಷಣ ಆರಂಭಿಸಬೇಕು ’ ಎಂದು ಸಚಿವಾಲಯ ತಿಳಿಸಿದೆ.
ಭಾರತದಲ್ಲಿ ಕೋವಿಡ್ನಿಂದ ಈವರೆಗೆ 17,834 ಮಂದಿ ಮೃತಪಟ್ಟಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.