ಐಜ್ವಾಲ್: ಅಸ್ಸಾಂ– ಮಿಜೋರಾಂ ಗಡಿಯಲ್ಲಿ ಮತ್ತೆ ಉದ್ವಿಗ್ನತೆ ಭುಗಿಲೆದ್ದಿದೆ. ಮಿಜೋರಾಂ ರಾಜ್ಯದ ನಾಗರಿಕರ ಮೇಲೆ ಅಸ್ಸಾಂ ಪೊಲೀಸ್ ಸಿಬ್ಬಂದಿ ಗುಂಡು ಹಾರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆಯಲ್ಲಿ ಒಬ್ಬ ನಾಗರಿಕ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.
ಜುಲೈ 26ರಂದು ಈ ಎರಡೂ ಈಶಾನ್ಯ ರಾಜ್ಯಗಳ ಪೊಲೀಸ್ ಪಡೆಗಳ ನಡುವಿನ ಹಿಂಸಾತ್ಮಕ ಘರ್ಷಣೆಯಲ್ಲಿ ಏಳು ಜನರು ಸಾವನ್ನಪ್ಪಿದ್ದರು. 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಬಳಿಕ, ಹೊಂದಾಣಿಕೆಯ ಪ್ರಕ್ರಿಯೆ ನಡೆದು, ಶಾಂತಿ ಕಾಪಾಡಲು ಉಭಯ ರಾಜ್ಯಗಳು ಒಪ್ಪಿಗೆ ಸೂಚಿಸಿದ್ದವು. ಈ ಮಧ್ಯೆಯೇ ಮತ್ತೆ ಉದ್ವಿಗ್ನತೆ ತಲೆದೋರಿದೆ.
ಅಸ್ಸಾಂನ ಹೈಲಕಂಡಿ ಜಿಲ್ಲೆಯ ಗಡಿಭಾಗದ ವಿವಾದಿತ ಐಟ್ಲಾಂಗ್ ಪ್ರದೇಶದಲ್ಲಿ ಮುಂಜಾನೆ 2 ಗಂಟೆ ಸುಮಾರಿಗೆ ವೈರೆಂಗ್ಟೆ ಪಟ್ಟಣದ ಮೂವರು ನಿವಾಸಿಗಳು ಅಸ್ಸಾಂನ ಬಿಲೈಪುರದ ನಿವಾಸಿಯೊಬ್ಬರಿಂದ ಮಾಂಸ ಸಂಗ್ರಹಿಸಲು ಹೋದಾಗ ಈ ಘಟನೆ ನಡೆದಿದೆ ಎಂದು ಕೊಲಾಸಿಬ್ ಜಿಲ್ಲಾ ಉಪ ಆಯುಕ್ತ ಎಚ್. ಲಾಲ್ತಲಾಂಗ್ಲಿಯಾನ ಪಿಟಿಐಗೆ ತಿಳಿಸಿದರು.
ಅಂತರರಾಜ್ಯ ಗಡಿಯಲ್ಲಿ ಕಾವಲು ಕಾಯುತ್ತಿದ್ದ ಅಸ್ಸಾಂ ಪೊಲೀಸ್ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ ಒಬ್ಬ ವ್ಯಕ್ತಿ ಗಾಯಗೊಂಡಿದ್ದಾನೆ ಎಂದು ಅವರು ಹೇಳಿದರು. ಈ ಕುರಿತಂತೆ ಅಸ್ಸಾಂ ಕಡೆಯಿಂದ ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.