ನವದೆಹಲಿ: ಐತಿಹಾಸಿಕ ಅನ್ಯಾಯವನ್ನು ಸರಿಪಡಿಸಲು, ನೆರೆ ರಾಷ್ಟ್ರಗಳ ಅಲ್ಪಸಂಖ್ಯಾತರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸುವ ಸಲುವಾಗಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರಲಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.
ದೆಹಲಿಯ ನ್ಯಾಷನಲ್ ಕೆಡೆಟ್ ಕಾರ್ಪ್ಸ್ ರ್ಯಾಲಿಯಲ್ಲಿ ದೇಶ ವಿಭಜನೆ ಮಾಡುವ ವೇಳೆಯಲ್ಲಿ ಅನ್ಯಾಯವಾಗಿರುವ ಕುರಿತು ಮಾತನಾಡುತ್ತಾ, ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದಾಗ ಸ್ವತಂತ್ರ್ಯ ಭಾರತದಲ್ಲಿ ಆಳ್ವಿಕೆ ನಡೆಸುತ್ತಿದ್ದವರು ವಿಭಜನೆಯನ್ನು ಒಪ್ಪಿಕೊಂಡರು. ನೆಹರು-ಲಿಖಾಯತ್ ಪ್ಯಾಕ್ಟ್ ಆಗ ಅಲ್ಪಸಂಖ್ಯಾತರ ರಕ್ಷಣೆ ಕುರಿತು ಮಾತನಾಡಿದ್ದರು. ಗಾಂಧೀಜಿ ಕೂಡ ಅದನ್ನೇ ಬಯಸಿದ್ದರು. ಅಂದು ಭಾರತ ನೀಡಿದ್ದ ಭರವಸೆಯನ್ನು ಈಡೇರಿಸಲು ಸರ್ಕಾರವು ಇಂದು ಸಿಎಎ ಅನ್ನು ಜಾರಿಗೆ ತಂದಿದೆ ಎಂದರು.
ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸುತ್ತಿರುವವರ ಬಗ್ಗೆ ಮಾತನಾಡಿದ ಅವರು, ಈಗ ಕಾಯ್ದೆಯನ್ನು ವಿರೋಧಿಸುತ್ತಿರುವವರೆಲ್ಲರೂ ಮತಬ್ಯಾಂಕ್ ರಾಜಕಾರಣದಿಂದ ಪ್ರೇರಣೆಗೊಂಡಿದ್ದಾರೆ. ಅವರು ಏಕೆ ದೌರ್ಜನ್ಯವಾಗುತ್ತಿರುವುದನ್ನು ಗುರುತಿಸುತ್ತಿಲ್ಲ, ದೌರ್ಜನ್ಯವನ್ನು ಏಕೆ ನಿರಾಕರಿಸುತ್ತಿದ್ದಾರೆ ಎಂಬುದಕ್ಕೆ ಅವರು ಪ್ರತಿಕ್ರಿಯಿಸಬೇಕು. ಕೆಲವರಂತು ದಲಿತರ ಧ್ವನಿಯಂತೆ ವರ್ತಿಸುತ್ತಾರೆ. ಆದರೆ ಅದೇ ಜನ ಏಕೆ ಪಾಕಿಸ್ತಾನದಲ್ಲಿ ದಲಿತರ ಮೇಲಾಗುತ್ತಿರುವ ದೌರ್ಜನ್ಯವನ್ನು ಕಡೆಗಣಿಸುತ್ತಿದ್ದಾರೆ. ಕಿರುಕುಳಕ್ಕೊಳಗಾಗಿ ಪಾಕಿಸ್ತಾನವನ್ನು ತೊರೆದು ಭಾರತಕ್ಕೆ ಬರುತ್ತಿರುವ ಬಹುತೇಕರು ದಲಿತರೇ ಎಂಬುದನ್ನು ಅವರು ಮರೆತಿದ್ದಾರೆ ಎಂದು ಕಿಡಿಕಾರಿದರು.
ಸರ್ಕಾರದ ನಿರ್ಧಾರದ ವಿರುದ್ಧ ಅಪಪ್ರಚಾರ ನಡೆಸಿದರೆ ಇಡೀ ವಿಶ್ವದಲ್ಲಿ ನನ್ನ ಖ್ಯಾತಿಯ ಮೇಲೆ ಪರಿಣಾಮ ಬೀರಲಿದೆ ಎಂದು ಅವರು ಭಾವಿಸಿದ್ದಾರೆ. ಆದರೆ ನಾನು ನನ್ನ ಕೀರ್ತಿಗಾಗಿ ಕೆಲಸ ಮಾಡುವುದಿಲ್ಲ. ಆದರೆ ಭಾರತದ ಖ್ಯಾತಿಗಾಗಿ ಕೆಲಸ ಮಾಡುತ್ತೇನೆ ಎನ್ನುವುದನ್ನು ಈ ವದಂತಿ ಹಬ್ಬುವವರು ತಿಳಿದುಕೊಳ್ಳಬೇಕಿದೆ.
ನಮ್ಮ ಮೇಲೆ ಯುದ್ದ ಸಾರಿ ನೆರೆಯ ದೇಶ ಮೂರು ಬಾರಿ ಸೋಲುಂಡಿರುವುದು ನಮಗೆ ತಿಳಿದೇ ಇದೆ. ಅವರನ್ನು ಸೋಲಿಸಲು ನಮ್ಮ ಭದ್ರತಾ ಪಡೆಗೆ 10-12 ದಿನಗಳಿಗಿಂತಲೂ ಹೆಚ್ಚಿನ ಸಮಯ ಬೇಕಾಗುವುದಿಲ್ಲ. ದಶಕಗಳಿಂದಲೂ ಕೂಡ ಅವರು ಭಾರತದ ಮೇಲೆ ತೆರೆ ಮರೆಯ ಯುದ್ಧವನ್ನು ಮಾಡುತ್ತಲೇ ಇದ್ದಾರೆ. ಇದರಿಂದಾಗಿ ಸಾವಿರಾರು ನಾಗರಿಕರು ಮತ್ತು ಯೋಧರು ಪ್ರಾಣ ಕಳೆದುಕೊಂಡಿದ್ದಾರೆ ಎಂದರು.
ಹಲವಾರು ಉಗ್ರ ಸಂಘಟನೆಗಳು ಈಶಾನ್ಯ ಪ್ರದೇಶದಿಂದಲೇ ಬರುತ್ತವೆ. ಏಕೆಂದರೆ ಅವರಿಗೆ ಸಂವಿಧಾನದಲ್ಲಿ ನಂಬಿಕೆಯಿಲ್ಲ ಮತ್ತು ಹಿಂಸಾಚಾರದಲ್ಲಿ ಮಾತ್ರ ನಂಬಿಕೆಯನ್ನಿಟ್ಟಿರುತ್ತಾರೆ. ನಿನ್ನೆಯಷ್ಟೇ ನ್ಯಾಷನಲ್ ಡೆಮಾಕ್ರಟಿಕ್ ಫ್ರಂಟ್ ಆಫ್ ಬೋಡೊಲ್ಯಾಂಡ್ (ಎನ್ಡಿಎಫ್ಬಿ)ನೊಂದಿಗೆ ಸರ್ಕಾರ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿದೆ. ದೇಶವು ಇಂದು ಯುವ ಚಿಂತನೆಗಳಿಂದ ತುಂಬಿದ್ದು, ಯುವಜನರ ಚಿಂತನೆಗಳಿಂದಾಗಿ ದೇಶಅಭಿವೃದ್ಧಿ ಪಥದಲ್ಲಿದೆ. ಅವರ ಮನೆಗೇ ನುಗ್ಗಿ ಮಾಡಿದ ಸರ್ಜಿಕಲ್ ಸ್ಟ್ರೈಕ್, ಏರ್ ಸ್ಟ್ರೈಕ್ಗಳು ಉಗ್ರರಿಗೆ ತಕ್ಕ ಪಾಠವನ್ನು ಕಲಿಸಿವೆ ಎಂದು ಹೇಳಿದರು.
ಇದನ್ನೂ ಓದಿ:ಬೋಡೊಲ್ಯಾಂಡ್: ಮಹತ್ವದ ಒಪ್ಪಂದಕ್ಕೆ ಕೇಂದ್ರ ಸಹಿ
ಕಳೆದ 30 ವರ್ಷಗಳಲ್ಲಿ ಒಂದೇ ಒಂದು ಮುಂದುವರಿದ ತಂತ್ರಜ್ಞಾನದ ಫೈಟರ್ ವಿಮಾನವನ್ನುಕೂಡ ಭಾರತೀಯ ವಾಯು ಸೇನೆಗೆ ನೀಡಲಾಗಿರಲಿಲ್ಲ. ಹಳೆಯ ಯುದ್ಧ ವಿಮಾನಗಳನ್ನೇ ಬಳಸಲಾಗುತ್ತಿತ್ತು. ಇದರಿಂದಾಗಿ ಅಪಘಾತವಾಗುತ್ತಿತ್ತು, ಪೈಲಟ್ಗಳ ಜೀವ ಹಾನಿಗೆ ಕಾರಣವಾಗುತ್ತಿತ್ತು. 3 ದಶಕಗಳಿಂದಲೂ ಬಾಕಿ ಇದ್ದ ಕೆಲಸಗಳು ಈಗ ನಮ್ಮಿಂದ ಪೂರ್ಣಗೊಂಡಿವೆ. ಮುಂದಿನ ಜನರೇಷನ್ನ ಯುದ್ಧ ವಿಮಾನ ರಫೇಲ್ ಅನ್ನು ಕೂಡ ಈಗ ಹೊಂದಿದ್ದೇವೆ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.