ADVERTISEMENT

ವಾಘಾ- ಅಟ್ಟಾರಿ ಗಡಿಯಲ್ಲಿ ಬೀಟಿಂಗ್ ರಿಟ್ರೀಟ್ ರದ್ದು ಮಾಡಿದ ಬಿಎಸ್‍ಎಫ್ 

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2019, 10:05 IST
Last Updated 1 ಮಾರ್ಚ್ 2019, 10:05 IST
   

ನವದೆಹಲಿ: ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಬರುವಿಕೆಗಾಗಿ ಜನರು ವಾಘಾ ಗಡಿಯಲ್ಲಿ ಕಾಯುತ್ತಿದ್ದಾರೆ. ಅಭಿನಂದನ್ ಅವರನ್ನು ಸಂಜೆ 4 ಗಂಟೆಯ ಹೊತ್ತಿಗೆ ಬಿಡುಗಡೆ ಮಾಡುವುದಾಗಿ ಪಾಕಿಸ್ತಾನ ಹೇಳಿದ್ದು, ಭಾರತದ ಗಡಿ ಭದ್ರತಾ ಪಡೆ (ಬಿಎಸ್‍ಎಫ್) ವಾಘಾ- ಅಟ್ಟಾರಿಗಡಿಯಲ್ಲಿ ನಡೆಯುವ ಬೀಟಿಂಗ್ ರಿಟ್ರೀಟ್ ಕಾರ್ಯಕ್ರಮ ರದ್ದು ಮಾಡಿದೆ.

ರಿಟ್ರೀಟ್ ಕಾರ್ಯಕ್ರಮಕ್ಕಿಂತ ನಮಗೆ ಐಎಎಫ್ ಪೈಲಟ್ ಅಭಿನಂದನ್ ಹೆಚ್ಚು ಮುಖ್ಯ. ಹಾಗಾಗಿ ಬೀಟಿಂಗ್ ರಿಟ್ರೀಟ್ ಕಾರ್ಯಕ್ರಮ ರದ್ದು ಮಾಡಲಾಗಿದೆ ಎಂದು ಅಮೃತ್‍ಸರ ಜಿಲ್ಲಾಧಿಕಾರಿ ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ಸುದ್ದಿ ಮಾಡಿದೆ.

ಅಭಿನಂದನ್ ಅವರಿಗೆ ಸ್ವಾಗತ ಕೋರಲು ವಾಘಾ ಗಡಿಯಲ್ಲಿ ಜನರು ಸೇರಿದ್ದು, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದ್ದಾರೆ.

ADVERTISEMENT

ಐಎಎಫ್ ಪೈಲಟ್ ಬಿಡುಗಡೆ ಸುದ್ದಿ ಖುಷಿ ತಂದಿದೆ: ವಿ.ಕೆ.ಸಿಂಗ್
ವಿಂಗ್ ಕಮಾಂಡರ್ ಅಭಿನಂದನ್ವರ್ಧಮಾನ್ ಅವರನ್ನು ಪಾಕಿಸ್ತಾನ ಬಿಡುಗಡೆ ಮಾಡಲು ತೀರ್ಮಾನಿಸಿರುವ ಸುದ್ದಿ ಖುಷಿ ತಂದಿದೆ ಎಂದು ಕೇಂದ್ರ ಸಚಿವ, ಮಾಜಿ ಸೇನಾಧಿಕಾರಿ ವಿ.ಕೆ ಸಿಂಗ್ ಹೇಳಿದ್ದಾರೆ.

ಸರ್ಕಾರದ ಮುಂದಿನ ನಡೆ ಏನು ಎಂಬ ಪ್ರಶ್ನೆಗೆ ಉತ್ತರಿಸಿದ ಸಿಂಗ್, ಕೇಂದ್ರ ಸರ್ಕಾರ ತಕ್ಕ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಈ ಬಗ್ಗೆ ಹೆಚ್ಚಿನ ವಿಷಯಗಳನ್ನು ಬಹಿರಂಗ ಪಡಿಸಲಾಗುವುದಿಲ್ಲ ಎಂದು ಹೇಳಿದ್ದಾರೆ.

ಜಿನೀವಾ ಒಪ್ಪಂದದ ಪ್ರಕಾರ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ, ಅಭಿನಂದನ್ ಬಿಡುಗಡೆಯಾಗುತ್ತಿರುವುದು ಖುಷಿಯ ವಿಚಾರ.ಶಾಂತಿ ಸಂಕೇತವಾಗಿ ಪಾಕ್ ಈ ಕಾರ್ಯ ಮಾಡುತ್ತಿರುವುದಾದರೆ ಅದೂ ದೊಡ್ಡ ಖುಷಿ. ಆದರೆ ಪಾಕ್ ಇನ್ನಷ್ಟು ಕೆಲಸಗಳನ್ನು ಮಾಡಬೇಕಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.