ನವದೆಹಲಿ: ಬಿಎಸ್ಎನ್ಎಲ್ ಪುನಶ್ಚೇತನಕ್ಕೆಂದು ಘೋಷಿಸಿದ್ದ ₹ 69,000 ಕೋಟಿ ಮೊತ್ತದ ಪ್ಯಾಕೇಜ್ ಅನ್ನು ಜಾರಿಗೆ ತರುವಲ್ಲಿ, ಕೇಂದ್ರ ಸರ್ಕಾರದ ವಿಳಂಬವನ್ನು ವಿರೋಧಿಸಿ ಸಂಸ್ಥೆಯ ನೌಕರರ ಸಂಘದ ಸದಸ್ಯರು ಸೋಮವಾರ ದೇಶದಾದ್ಯಂತ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ.
ನಷ್ಟದಲ್ಲಿರುವ ಬಿಎಸ್ಎನ್ಎಲ್, ಎಂಟಿಎನ್ಎಲ್ಗಳ ವಿಲೀನ ಮತ್ತು ಎರಡೂ ಸಂಸ್ಥೆಗಳ ಪುನಶ್ಚೇತನಕ್ಕೆಂದು ಕೇಂದ್ರ ಸರ್ಕಾರವು 2019ರ ಅಕ್ಟೋಬರ್ನಲ್ಲಿ ವಿಶೇಷ ಪ್ಯಾಕೇಜ್ ಘೋಷಿಸಿತ್ತು. ಈ ಪ್ರಕಾರ ಬಿಎಸ್ಎನ್ಎಲ್ಗೆ 4ಜಿ ತರಂಗಾಂತರ ಹಂಚಿಕೆ, ಬಾಂಡ್ ಮೂಲಕ ಬಂಡವಾಳ ಕ್ರೋಡೀಕರಣ ಮತ್ತು ನೌಕರಿಗೆ ವಿಆರ್ಎಸ್ ನೀಡುವುದಾಗಿ ಸರ್ಕಾರ ಘೋಷಿಸಿತ್ತು.
‘ಈವರೆಗೆ ವಿಆರ್ಎಸ್ ಯೋಜನೆಯನ್ನು ಮಾತ್ರ ಜಾರಿಗೆ ತರಲಾಗಿದೆ. 4ಜಿ ತರಂಗಾಂತರವನ್ನು ಹಂಚಿಕೆ ಮಾಡಿಲ್ಲ. ಈಗಿನ ಪರಿಸ್ಥಿತಿಯನ್ನು ಗಮನಿಸಿದರೆ, 2020ರ ಅಂತ್ಯದ ವೇಳೆಗೂ ಬಿಎಸ್ಎನ್ಎಲ್ 4ಜಿ ಸೇವೆ ಆರಂಭಿಸುವ ಸಾಧ್ಯತೆ ಇಲ್ಲ. ಬಂಡವಾಳ ಕ್ರೋಡೀಕರಿಸಲು ಬಾಂಡ್ ಹಂಚಲೂ ಅನುಮತಿ ದೊರೆತಿಲ್ಲ. ಹೀಗಾಗಿ ಬಿಎಸ್ಎನ್ಎಲ್ ಕಾರ್ಯಾಚರಣೆ ನಡೆಸಲೂ ತೊಡಕಾಗಿದೆ. ಸರ್ಕಾರವು ಘೋಷಿಸಿದ್ದ ಪುನಶ್ಚೇತನ ಪ್ಯಾಕೇಜ್ ಅನ್ನು ಶೀಘ್ರವೇ ಅನುಷ್ಠಾನಕ್ಕೆ ತರಬೇಕು ಎಂದು ಒತ್ತಾಯಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದೇವೆ’ ಎಂದು ಸಂಘಟನೆಯು ತಿಳಿಸಿದೆ.
‘ಸಂಸ್ಥೆಯ ನೌಕರರಿಗೆ ಸರಿಯಾದ ಸಮಯಕ್ಕೆ ವೇತನ ಬರುತ್ತಿಲ್ಲ. ಗುತ್ತಿಗೆ ನೌಕರರಿಗೆ 10 ತಿಂಗಳ ವೇತನ ನೀಡಿಲ್ಲ’ ಎಂದು ಸಂಘಟನೆಯು ಆರೋಪಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.