ADVERTISEMENT

ಕಾಂಗ್ರೆಸ್, ಗೆಹ್ಲೋಟ್‌ಗೆ ಪಾಠ ಕಲಿಸಲು ಅವಕಾಶಕ್ಕಾಗಿ ಕಾಯುತ್ತಿದ್ದೆವು: ಮಾಯಾವತಿ

​ಪ್ರಜಾವಾಣಿ ವಾರ್ತೆ
Published 28 ಜುಲೈ 2020, 9:42 IST
Last Updated 28 ಜುಲೈ 2020, 9:42 IST
   

ನವದೆಹಲಿ: ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರು ರಾಜಸ್ಥಾನದಲ್ಲಿ ಬಿಎಸ್‌ಪಿಯ ಆರು ಶಾಸಕರನ್ನು ಅಸಾಂವಿಧಾನಿಕವಾಗಿ ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸಿದ್ದರು. ಅವರು ಈ ಹಿಂದೆ ಅಧಿಕಾರಕ್ಕೇರಿದ್ದಾಗಲೂ ಹೀಗೆಯೇ ಮಾಡಿದ್ದರು. ಹಾಗಾಗಿ ನಾವು ಅವರು (ಗೆಹ್ಲೋಟ್) ಮತ್ತು ಅವರ ಪಕ್ಷಕ್ಕೆ (ಕಾಂಗ್ರೆಸ್‌ಗೆ) ಪಾಠ ಕಲಿಸಲು ಬಯಸಿದ್ದೆವು ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ.

ನಮ್ಮ ಪಕ್ಷವು ನ್ಯಾಯಾಲಯದ ಮೊರೆ ಹೋಗಬಹುದಿತ್ತು. ಆದರೆ, ಸರಿಯಾದ ಅವಕಾಶಕ್ಕಾಗಿ ಕಾಯಲು ನಿರ್ಧರಿಸಿದ್ದೆವು ಎಂದೂ ಹೇಳಿದ್ದಾರೆ.

‘ರಾಜಸ್ಥಾನದಲ್ಲಿ ಚುನಾವಣೆ ಫಲಿತಾಂಶದ ಬಳಿಕ ಬಿಎಸ್‌ಪಿಯು ತನ್ನ ಆರು ಶಾಸಕರ ಮೂಲಕ ಕಾಂಗ್ರೆಸ್‌ಗೆ ಬೇಷರತ್‌ ಬೆಂಬಲ ನೀಡಿತ್ತು. ದುರದೃಷ್ಟವಶಾತ್‌, ನಮ್ಮ ಪಕ್ಷಕ್ಕೆ ಹಾನಿಯಾಗುವಂತೆ ಮಾಡಲು ಗೆಹ್ಲೋಟ್‌ ಅವರು ದುರುದ್ದೇಶದಿಂದ ಬಿಎಸ್‌ಪಿ ಶಾಸಕರನ್ನು ಕಾಂಗ್ರೆಸ್‌ನಲ್ಲಿ ಸೇರಿಸಿಕೊಂಡರು’ ಎಂದು ಆರೋಪಿಸಿದ್ದಾರೆ

ADVERTISEMENT

‘ಬಿಎಸ್‌ಪಿ ಈ ಮೊದಲೇ ನ್ಯಾಯಾಲಯದ ಮೆಟ್ಟಿಲೇರಬಹುದಿತ್ತು. ಆದರೆ, ನಾವು ಕಾಂಗ್ರೆಸ್‌ ಹಾಗೂ ಮುಖ್ಯಮಂತ್ರಿ ಗೆಹ್ಲೋಟ್‌ಗೆ ಪಾಠ ಕಲಿಸಲು ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದೆವು. ಇದೀಗ ನ್ಯಾಯಾಲಯದ ಮೆಟ್ಟಿಲೇರಲು ನಿರ್ಧರಿಸಿದ್ದೇವೆ. ನಾವು ಈ ವಿಚಾರವನ್ನು ಮಾತ್ರ ಬಿಡುವುದಿಲ್ಲ. ಸುಪ್ರೀಂ ಕೋರ್ಟ್‌ಗೂ ಹೋಗಲಿದ್ದೇವೆ’ ಎಂದು ಹೇಳಿದ್ದಾರೆ.

‘ರಾಜಸ್ಥಾನ ವಿಧಾನಸಭೆಯಲ್ಲಿಅಶೋಕ್‌ ಗೆಹ್ಲೋಟ್‌ ವಿಶ್ವಾಸ ಮತ ಸಾಬೀತು ಪಡಿಸಬೇಕಾದರೆ, ಸರ್ಕಾರದ ವಿರುದ್ಧ ಮತ ಚಲಾಯಿಸುವಂತೆ ಪಕ್ಷದ ಶಾಸಕರಿಗೆ ಸೂಚಿಸಲಾಗುವುದು. ಅದು ಸಾಧ್ಯವಾಗದಿದ್ದರೆ, ಅವರಿಗೆ ಪಕ್ಷದಸದಸ್ಯತ್ವವನ್ನು ರದ್ದುಪಡಿಸಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.

ಬಿಎಸ್‌ಪಿ ಶಾಸಕರನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳುವುದು ಅನೈತಿಕ ಮತ್ತು ಇದು ರಾಜಸ್ಥಾನ ಮತದಾರರು ನೀಡಿದ ತೀರ್ಪಿಗೆ ವಿರುದ್ಧದ ನಡೆಯಾಗಲಿದೆ ಎಂದು ಕಿಡಿಕಾರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.