ADVERTISEMENT

ಕಾಂಗ್ರೆಸ್‌ ಜೊತೆ ಚುನಾವಣಾ ಮೈತ್ರಿ ಇಲ್ಲ: ಮಾಯಾವತಿ 

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2018, 12:47 IST
Last Updated 3 ಅಕ್ಟೋಬರ್ 2018, 12:47 IST
   

ಲಖನೌ: ಮುಂಬರುವ ರಾಜಸ್ಥಾನ ಮತ್ತು ಮಧ್ಯಪ್ರದೇಶ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಜೊತೆ ಚುನಾವಣಾ ಹೊಂದಾಣಿಕೆ ಇಲ್ಲ ಎಂದು ಬಹುಜನ ಸಮಾಜ ಪಕ್ಷ (ಬಿಎಸ್‌ಪಿ)ದ ಅಧ್ಯಕ್ಷೆ ಮಾಯಾವತಿ ಬುಧವಾರ ತಿಳಿಸಿದ್ದಾರೆ.

ಇದರಿಂದ ಈ ಎರಡು ರಾಜ್ಯಗಳಲ್ಲಿ ಬಿಜೆಪಿ ವಿರುದ್ಧ ಹೋರಾಡುವ ಕಾಂಗ್ರೆಸ್‌ ನೇತೃತ್ವದ ವಿರೋಧ ಪಕ್ಷ ಮೈತ್ರಿಗೆ ಹಿನ್ನಡೆಯಾದಂತಾಗಿದೆ.

ಕಾಂಗ್ರೆಸ್‌ನವರು ತಪ್ಪು ಗ್ರಹಿಕೆಯಿಂದ ಬಿಜೆಪಿಯನ್ನು ಸೋಲಿಸುತ್ತೇವೆ ಎಂಬ ಜಂಬದ ಮಾತುಗಳನ್ನು ಹೇಳುತ್ತಿದ್ದಾರೆ. ಆದರೆ ವಾಸ್ತವ ಚಿತ್ರಣವೇ ಬೇರೆ ಇದೆ, ಕಾಂಗ್ರೆಸ್ ಪಕ್ಷದ ತಪ್ಪುಗಳು ಮತ್ತು ಅವರ ಭ್ರಷ್ಟಾಚಾರವನ್ನು ಜನರು ಮರೆತಿಲ್ಲ, ಅವರು ತಮ್ಮ ತಪ್ಪನ್ನು ತಿದ್ದಿಕೊಳ್ಳಲು ತಯಾರಿಲ್ಲ ಎಂದು ಮಾಯಾವತಿ ಎಎನ್‌ಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ADVERTISEMENT

ಕಾಂಗ್ರೆಸ್‌ನ ದಿಗ್ವಿಜಯಸಿಂಗ್‌ನಂತಹ ನಾಯಕರು ಕಾಂಗ್ರೆಸ್‌–ಬಿಎಸ್‌ಪಿ ಮೈತ್ರಿಗೆ ಒಪ್ಪುತ್ತಿಲ್ಲ, ಅವರು ಕೇಂದ್ರದ ತನಿಖಾ ಸಂಸ್ಥೆಗಳಾದ ಇಡಿ ಮತ್ತು ಸಿಬಿಐಗೆ ಭಯಪಡುತ್ತಿದ್ದಾರೆ ಎಂದು ಮಾಯಾವತಿ ಹೇಳಿದ್ದಾರೆ.

ಎರಡು ವಾರಗಳ ಹಿಂದೆ ಮಾಯಾವತಿ ಛತೀಸ್‌ಗಡದಲ್ಲಿ ಅಜಿತ್ ಜೋಗಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ. ಇದೀಗ ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲೂ ಏಕಾಂಗಿ ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ. ಆದಾಗ್ಯೂ ಕಾಂಗ್ರೆಸ್‌ ನಾಯಕರು ಬಿಎಸ್‌ಪಿ ಜೊತೆಗಿನ ಮೈತ್ರಿ ಕುರಿತಂತೆ ಚರ್ಚೆ ಮುಂದುವರಿಸಿದ್ದಾರೆ. ಆದರೆ ಮಾಯಾವತಿ ಸ್ಥಾನ ಹೊಂದಾಣಿಕೆ ಮಾಡಿಕೊಳ್ಳಲು ಒಪ್ಪುತ್ತಿಲ್ಲ ಎಂದು ಬಿಎಸ್‌ಪಿಯ ಉನ್ನತ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.