ನವದೆಹಲಿ: ಕೃಷಿ ಕಾನೂನುಗಳನ್ನು ರದ್ದಪಡಿಸಬೇಕು ಎಂದು ಒತ್ತಾಯಿಸಿ ರೈತರು ಪ್ರತಿಭಟನೆ ನಡಸುತ್ತಿರುವ ದೆಹಲಿಯ ವಿವಿಧ ಗಡಿ ಪ್ರದೇಶಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.ಕೆಲವೆಡೆ ಕಾಂಕ್ರಿಟ್ ಸುರಿದು ಕಬ್ಬಿಣದ ಸರಳುಗಳನ್ನು ಮತ್ತು ಮುಳ್ಳು ತಂತಿಗಳನ್ನು ಹಾಕಲಾಗಿದೆ.ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ‘ಸೇತುವೆಗಳನ್ನು ನಿರ್ಮಿಸಿ, ಗೋಡೆಗಳನ್ನಲ್ಲ’ ಎಂದು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ರಾಹುಲ್ ಕೆಲವು ಚಿತ್ರಗಳನ್ನೂ ಹಂಚಿಕೊಂಡಿದ್ದಾರೆ.
ಕಳೆದ ವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ರಾಹುಲ್, ಕೇಂದ್ರ ಸರ್ಕಾರವು ‘ರೈತರ ಮೇಲೆ ಹಲ್ಲೆ ನಡೆಸುತ್ತಿದೆ, ಬೆದರಿಸುತ್ತಿದೆ ಮತ್ತು ಹಿಂಸಿಸುತ್ತಿದೆ’ ಎಂದು ಆರೋಪಿಸಿದ್ದರು. ಮುಂದುವರಿದು ಹೊಸದಾಗಿ ರೂಪಿಸಿರುವ ಮೂರು ಕಾನೂನುಗಳನ್ನು ತಕ್ಷಣವೇ ಹಿಂಪಡೆಯಬೇಕು ಮತ್ತು ಪ್ರತಿಭಟನೆಗಳು ಕೊನೆಗೊಳ್ಳಲಿವೆ ಎಂದು ಸರ್ಕಾರ ಭಾವಿಸುವುದು ತಪ್ಪು’ ಎಂದು ಹೇಳಿದ್ದರು.
ಕಳೆದ ಕೆಲವು ದಿನಗಳಿಂದ ಪ್ರತಿಭಟನಾ ಸ್ಥಳಕ್ಕೆ ಮತ್ತಷ್ಟು ರೈತರು ಬರುತ್ತಿರುವುದನ್ನು ಪರಿಗಣಿಸಿ ಘಾಜಿಪುರ್, ಸಿಂಘು ಮತ್ತು ಟಿಕ್ರಿ ಗಡಿ ಪ್ರದೇಶಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ದೆಹಲಿ ಪೊಲೀಸರು ದೆಹಲಿ–ಗಾಜಿಯಾಬಾದ್ ರಾಷ್ಟ್ರೀಯ ಹೆದ್ದಾರಿ–24 ಅನ್ನು ಮುಚ್ಚಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.