ADVERTISEMENT

ವಿಮಾನ ನಿಲ್ದಾಣದಲ್ಲಿ ರಾದ್ಧಾಂತ: ಉತ್ತರ ಪ್ರದೇಶದ ಉದ್ಯಮಿ ಬಂಧನ

​ಪ್ರಜಾವಾಣಿ ವಾರ್ತೆ
Published 22 ಜೂನ್ 2021, 12:23 IST
Last Updated 22 ಜೂನ್ 2021, 12:23 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಆರ್‌ಟಿ-ಪಿಸಿಆರ್ ಪರೀಕ್ಷೆ ಕಡ್ಡಾಯ ವರದಿಯನ್ನು ಕೊಂಡೊಯ್ಯದ ಕಾರಣ ವಿಮಾನಯಾನ ಸಂಸ್ಥೆ ಬೋರ್ಡಿಂಗ್ ನಿರಾಕರಿಸಿದ ಹಿನ್ನೆಲೆಯಲ್ಲಿ ಇಲ್ಲಿನ ವಿಮಾನ ನಿಲ್ದಾಣದಲ್ಲಿ ರಾದ್ಧಾಂತ ಮಾಡಿದ ಆರೋಪದ ಮೇರೆಗೆ ಉತ್ತರ ಪ್ರದೇಶದ 36 ವರ್ಷದ ಉದ್ಯಮಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಉದ್ಯಮಿ ರುದ್ರಾಪುರದ ಸೂರಜ್‌ ಪಾಂಡೆ ಎಂದು ಗುರುತಿಸಲಾಗಿದೆ. ವಿಸ್ತಾರಾ ಡೆಪ್ಯೂಟಿ ಮ್ಯಾನೇಜರ್ ದೀಪಕ್ ಧಂಧಾ ದೂರು ನೀಡಿದ್ದರು.

ಉದ್ಯಮಿ ಪಾಂಡೆ ಮುಂಬೈಗೆ ತೆರಳಬೇಕಿತ್ತು. ಆದರೆ ಆರ್‌ಟಿ-ಪಿಸಿಆರ್ ವರದಿ ಹೊಂದಿರಲಿಲ್ಲ. ಹಾಗಾಗಿ ಅವರಿಗೆ ಮುಂಬೈಗೆ ವಿಮಾನದಲ್ಲಿ ಪ್ರಯಾಣಿಸಲು ಅವಕಾಶವಿರಲಿಲ್ಲ. ಇದನ್ನು ಅವರಿಗೆ ತಿಳಿಸುತ್ತಿದ್ದಂತೆ, ಕೋಪೋದ್ರಿಕ್ತರಾಗಿ ಕೂಗಾಡಲು ಪ್ರಾರಂಭಿಸಿದರು. ಬ್ಯಾಗೇಜ್ ಬೆಲ್ಟ್ ಮೇಲೆ ಹತ್ತಿ, ಅದರ ಮೇಲೆ ನಡೆಯಲು ಪ್ರಾರಂಭಿಸಿದರು ಎಂದು ಧಂದಾ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

‘ಪಾಂಡೆ ನಮ್ಮ ಸಿಬ್ಬಂದಿ ಮತ್ತು ಇತರ ಗ್ರಾಹಕರೊಂದಿಗೆ ಕೆಟ್ಟದಾಗಿ ವರ್ತಿಸಿದರು. ಅವರು ನಡೆಸಿದ ಕೃತ್ಯಗಳು ವಿಮಾನ ನಿಲ್ದಾಣದ ಕಾರ್ಯಾಚರಣೆಗಳ ಸುರಕ್ಷತೆಗೆ ಧಕ್ಕೆ ತಂದವು’ ಎಂದು ದೂರಿದ್ದಾರೆ.

‘ದೂರು ಸ್ವೀಕರಿಸಿದ ನಂತರ ನಾವು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದೇವೆ. ಆರೋಪಿ ಸೂರಜ್ ಪಾಂಡೆ ದೆಹಲಿ ಪೊಲೀಸ್ ಕಾಯ್ದೆಯ ವಿವಿಧ ಸೆಕ್ಷನ್‌ಗಳಡಿ ಅಪರಾಧ ಎಸಗಿರುವುದು ಸಿಸಿಟಿವಿ ದೃಶ್ಯಾವಳಿಗಳು ಮತ್ತು ವಿಚಾರಣೆಯಿಂದ ಸಾಬೀತಾಗಿದೆ. ಆತನನ್ನು ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು’ ಎಂದು ಪೊಲೀಸ್ ಉಪ ಆಯುಕ್ತ (ಐಜಿಐ ವಿಮಾನ ನಿಲ್ದಾಣ) ರಾಜೀವ್ ರಂಜನ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.