ADVERTISEMENT

ಪೊಲೀಸರ ಮೇಲೆ ಕಾರು ಹತ್ತಿಸಲು ಯತ್ನಿಸಿದ ದನಗಳ್ಳರು: ಇಬ್ಬರು ಪೊಲೀಸರಿಗೆ ಗಾಯ

ಪಿಟಿಐ
Published 10 ನವೆಂಬರ್ 2023, 5:45 IST
Last Updated 10 ನವೆಂಬರ್ 2023, 5:45 IST
Venugopala K.
   Venugopala K.

ಪಾಲ್ಘರ್: ದನ ಕದ್ದೊಯ್ಯುತ್ತಿದ್ದ ವಾಹನವನ್ನು ತಡೆಯಲು ಯತ್ನಿಸಿದ ಪೊಲೀಸರ ಮೇಲೆ ವಾಹನ ಹತ್ತಿಸಲು ಯತ್ನಿಸಿರುವ ಘಟನೆ ಮಹಾರಾಷ್ಟ್ರದ ಪಾಲ್ಘರ್‌ ಜಿಲ್ಲೆಯಲ್ಲಿ ನಡೆದಿದೆ. ಘಟನೆಯಲ್ಲಿ ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ. ಈ ಸಂಬಂಧ ಇಬ್ಬರು ದನಗಳ್ಳರನ್ನು ಬಂಧಿಸಲಾಗಿದೆ.

ಖಚಿತ ಮಾಹಿತಿ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಪೊಲೀಸ್ ಗಸ್ತು ತಂಡವು ಒಂದು ಇನ್ನೋವಾ ಕಾರು ಮತ್ತು ಸ್ಕಾರ್ಪಿಯೊವನ್ನು ತಡೆದಿದ್ದಾರೆ.

ಇನ್ನೋವಾ ಕಾರನ್ನು ಚಾಲಕ ವೇಗವಾಗಿ ಓಡಿಸಲು ಯತ್ನಿಸಿದ್ದು, ಸಬ್ ಇನ್ಸ್‌ಪೆಕ್ಟರ್ ರವೀಂದ್ರ ವಾಂಖೆಡೆ ಅವರಿಗೆ ಗುದ್ದಿ ಬಳಿಕ ಸೇತುವೆಗೆ ಡಿಕ್ಕಿ ಹೊಡೆದಿದೆ. ರವೀಂದ್ರ ತೀವ್ರವಾಗಿ ಗಾಯಗೊಂಡಿದ್ದಾರೆ. ಇನ್ನೊಂದು ವಾಹನವನ್ನು ನಿಲ್ಲಿಸಲು ಮುಂದಾದಾಗ ಪೊಲೀಸ್ ಸಿಬ್ಬಂದಿ ರಾಕೇಶ್ ಪಾಟೀಲ್ ಅವರ ಕೈಗಳಿಗೆ ಗಾಯಗಳಾಗಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.

ADVERTISEMENT

ತಮ್ಮ ಸಹೋದ್ಯೋಗಿಗಳಿಗೆ ಗಂಭೀರ ಗಾಯದ ಹೊರತಾಗಿಯೂ ಪೊಲೀಸ್ ತಂಡವು ಇನ್ನೋವಾ, ಸ್ಕಾರ್ಪಿಯೊ ಮತ್ತು ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದೆ.

ಇನ್ನೋವಾ ಮತ್ತು ಸ್ಕಾರ್ಪಿಯೊದಲ್ಲಿ ಇದ್ದ ಎರಡು ಹಸುಗಳು ಮತ್ತು ಎಮ್ಮೆಯನ್ನು ಪೊಲೀಸರ ತಂಡ ರಕ್ಷಿಸಿದೆ.

ಕದ್ದ ಜಾನುವಾರು ಸಾಗಾಟದಲ್ಲಿ ಒಂಬತ್ತು ಮಂದಿ ಭಾಗಿಯಾಗಿದ್ದು, ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಉಳಿದವರು ಕತ್ತಲೆಯಲ್ಲಿ ತಪ್ಪಿಸಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಪಾಲ್ಘರ್ ಗ್ರಾಮಾಂತರ) ಬಾಳಾಸಾಹೇಬ ಪಾಟೀಲ ಹೇಳಿದ್ದಾರೆ.

ವಶಪಡಿಸಿಕೊಂಡ ವಾಹನಗಳಿಂದ ಕುಡಗೋಲು, ಕಬ್ಬಿಣದ ಸರಳುಗಳು ಮತ್ತು ಒಂದು ಚೀಲ ಕಲ್ಲುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.