ನವದೆಹಲಿ: ಭ್ರಷ್ಟಾಚಾರ ಪ್ರಕರಣವನ್ನು ಎದುರಿಸುತ್ತಿರುವ ಐಆರ್ಎಸ್ ಅಧಿಕಾರಿ ಸನ್ಸಾರ್ ಚಾಂದ್ ಅವರಿಗೆ ದೂರವಾಣಿ ಕರೆ ವಿವರಗಳ ದಾಖಲೆಗಳನ್ನು ಸಂಗ್ರಹಿಸಿ ನೆರವು ನೀಡಿದ ಆರೋಪದ ಮೇಲೆ ಮಾಜಿ ಎನ್ಐಎ ಅಧಿಕಾರಿ ಜಲಜ್ ಶ್ರೀವಾತ್ಸವ ಅವರ ವಿರುದ್ಧ ಸಿಬಿಐ ದೋಷಾರೋಪ ಪಟ್ಟಿ ಸಲ್ಲಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇತ್ತೀಚಿಗೆ ಸಿಬಿಐ ವಿಶೇಷ ನ್ಯಾಯಾಲಯವೊಂದಕ್ಕೆ ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ಶ್ರೀವಾಸ್ತವ ಅವರ ಜೊತೆ ಚಾಂದ್ ಅವರ ಪತ್ನಿ ಅವಿನಾಶ್ ಕೌರ್ ಅವರೂ ಒಬ್ಬ ಆರೋಪಿಯಾಗಿದ್ದಾರೆ ಎಂದು ಹೆಸರಿಸಿದೆ.
ಆರೋಪಿಗಳ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ, ಪಿತೂರಿ (120–ಬಿ) ಮತ್ತು ನಂಬಿಕೆ ದ್ರೋಹ (409) ಸೇರಿದಂತೆ ವಿವಿಧ ಐಪಿಎಸ್ ಸೆಕ್ಷನ್ಗಳಡಿ ಸಿಬಿಐ ಪ್ರಕರಣ ದಾಖಲಿಸಿದೆ ಎಂದು ಅಧಿಕಾರಿಗಳು ಹೇಳಿದರು.
ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್ಐಎ) ಹುದ್ದೆಯನ್ನು ನಿರ್ವಹಿಸುವಾಗ ಶ್ರೀವಾಸ್ತವ್ ಅವರು ದಕ್ಷಿಣ ದೆಹಲಿಯ ಆಂಡ್ರ್ಯೂವ್ಸ್ ಗಂಜ್ ಪ್ರದೇಶದ ಹುಡ್ಕೊ ಸ್ಥಳದಲ್ಲಿದ್ದ ಚಾಂದ್ ಮತ್ತು ಅವಿನಾಶ್ ಕೌರ್ ಅವರ ನೆರೆಯ ನಿವಾಸಿಗಳಾಗಿದ್ದರು. ಆದ್ದರಿಂದ ಚಾಂದ್ ಅವರು ಸಿಲುಕಿದ್ದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದ ಕರೆ ವಿವರಗಳ ದಾಖಲೆಗಳನ್ನು ಒದಗಿಸಿ ನೆರವು ನೀಡಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಚಾಂದ್ ಅವರು ಕಾನ್ಪುರದ ತೆರಿಗೆ ಆಯುಕ್ತರಾಗಿದ್ದರು. ಇವರ ಪತ್ನಿ ಕೌರ್ ಅವರು ಕಾನ್ಪುರ ಮೂಲದ ಉದ್ಯಮಿಯಿಂದ ₹1.5 ಲಕ್ಷ ಲಂಚ ಪಡೆದ ಆರೋಪದಲ್ಲಿ 2018ರಲ್ಲಿ ಸಿಬಿಐ ಅವರನ್ನು ಬಂಧಿಸಿದ್ದರು ಎಂದೂ ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.