ನವದೆಹಲಿ: ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯು (ಸಿಬಿಎಸ್ಇ) 10, 11 ಮತ್ತು 12ನೇ ತರಗತಿಯ ಪಠ್ಯಕ್ರಮದಲ್ಲಿ ವ್ಯಾಪಕ ಬದಲಾವಣೆಗಳನ್ನು ಮಾಡಿದೆ. ಅಲಿಪ್ತ ನೀತಿ, ಶೀತಲ ಸಮರ ಯುಗ, ಆಫ್ರಿಕಾ ಮತ್ತು ಏಷ್ಯಾ ಪ್ರದೇಶದಲ್ಲಿ ಮುಸ್ಲಿಂ ಸಾಮ್ರಾಜ್ಯಗಳ ಉದಯ, ಮೊಘಲ್ ಚರಿತ್ರೆ, ಕೈಗಾರಿಕಾ ಕ್ರಾಂತಿ, ಉರ್ದು ಮತ್ತು ಪಂಜಾಬಿ ಭಾಷೆಯ ಅತ್ಯುತ್ತಮ ಕವಿ ಎಂದು ಗುರುತಿಸಲಾಗಿರುವ ಫೈಝ್ ಅಹಮ್ಮದ್ ಫೈಝ್ ಅವರ ಕವಿತೆಗಳನ್ನು ಪಠ್ಯದಿಂದ ಕೈಬಿಡಲಾಗಿದೆ.
11 ಮತ್ತು 12ನೇ ತರಗತಿಯ ಚರಿತ್ರೆ ಮತ್ತು ರಾಜಕೀಯ ಶಾಸ್ತ್ರ ಪಠ್ಯಕ್ರಮದಲ್ಲಿ ಮಾಡಿರುವ ಬದಲಾವಣೆಯು ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರಲಿದೆ. 11ನೇ ತರಗತಿಯ ಚರಿತ್ರೆ ಪಠ್ಯದಿಂದ ‘ಕೇಂದ್ರೀಯ ಇಸ್ಲಾಮಿಕ್ ಪ್ರದೇಶಗಳು’ ಎಂಬ ಅಧ್ಯಾಯ
ವನ್ನು ಕೈಬಿಡಲಾಗಿದೆ. ಈ ಅಧ್ಯಾಯದಲ್ಲಿ ಆಫ್ರಿಕಾ ಮತ್ತು ಏಷ್ಯಾದಲ್ಲಿ ಮುಸ್ಲಿಂ ಸಾಮ್ರಾಜ್ಯಗಳ ಉದಯದ ವಿವರಗಳು ಇವೆ. ಖಲೀಫಾ ಪದ್ಧತಿ, ಆ ಸಾಮ್ರಾಜ್ಯಗಳ ಅವಧಿಯಲ್ಲಿನ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಯ ಮಾಹಿತಿ ಇದೆ. ಗಣಿತಶಾಸ್ತ್ರ ಪಠ್ಯದಿಂದ ಗಣಿತಶಾಸ್ತ್ರೀಯ ತರ್ಕದ ಬಗೆಗಿನ ಅಧ್ಯಾಯವನ್ನು ಕೈಬಿಡಲಾಗಿದೆ.
12ನೇ ತರಗತಿಯ ಚರಿತ್ರೆ ಪಠ್ಯದಿಂದ ಕಥಾನಕಗಳ ಮೂಲಕ ಇತಿಹಾಸದ ಮರುಸೃಷ್ಟಿ ಎಂಬ ಅಧ್ಯಾಯವನ್ನು ತೆಗೆಯಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.