ADVERTISEMENT

ಇಂದು ಮದ್ರಾಸ್‌ ವಿಧಾನ ಪರಿಷತ್‌ ಶತಮಾನೋತ್ಸವ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2021, 15:53 IST
Last Updated 1 ಆಗಸ್ಟ್ 2021, 15:53 IST
ರಾಮನಾಥ ಕೋವಿಂದ್‌
ರಾಮನಾಥ ಕೋವಿಂದ್‌   

ಚೆನ್ನೈ: ಮದ್ರಾಸ್‌ ವಿಧಾನ ಪರಿಷತ್‌ನ (ಎಂಎಲ್‌ಸಿ) ಶತಮಾನೋತ್ಸವ ಕಾರ್ಯಕ್ರಮ ಸೋಮವಾರ (ಆಗಸ್ಟ್‌ 2) ಇಲ್ಲಿನ ವಿಧಾನಸಭೆಯಲ್ಲಿ ನಡೆಯಲಿದೆ.

ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ಇದೇ ವೇಳೆ ಅವರು ಡಿಎಂಕೆ ವರಿಷ್ಠ ಹಾಗೂ ಐದು ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಎಂ.ಕರುಣಾನಿಧಿಯವರ ಭಾವಚಿತ್ರವನ್ನು ವಿಧಾನಸಭೆಯ ಸಭಾಭವನದಲ್ಲಿ ಅನಾವರಣಗೊಳಿಸುವರು.

1921ರ ಜನವರಿ 12ರಂದು ಮದ್ರಾಸ್‌ ವಿಧಾನಪರಿಷತ್‌ ಅಸ್ತಿತ್ವಕ್ಕೆ ಬಂತು. ಬ್ರಿಟಿಷ್‌ ಆಳ್ವಿಕೆಯ ಮದ್ರಾಸ್‌ ಪ್ರೆಸಿಡೆನ್ಸಿಯಲ್ಲಿ ಜಸ್ಟಿಸ್‌ ಪಾರ್ಟಿ ಆಗ ಮೊದಲ ಸರ್ಕಾರ ರಚಿಸಿತ್ತು. ಇದೇ ನಂತರದ ದಿನಗಳಲ್ಲಿ ಡಿಎಂಕೆ ಪಕ್ಷವಾಯಿತು.

ADVERTISEMENT

ಕೆಲ ವರ್ಷಗಳ ನಂತರ ಆಗಿನ ಮದ್ರಾಸ್‌ ರಾಜ್ಯದ ವಿಧಾನಸಭೆ ಎಂದು ಕರೆಯಲಾದ ಮದ್ರಾಸ್‌ ವಿಧಾನ ಪರಿಷತ್‌, ಭಾಷಾವಾರು ಪ್ರಾಂತ್ಯಗಳ ರಚನೆ ನಂತರ ತಮಿಳುನಾಡು ವಿಧಾನಸಭೆಯಾಯಿತು.

ಕೋವಿಂದ್‌ ಅವರು ಮಂಗಳವಾರ ನೀಲಗಿರಿಗೆ ತೆರಳಿ, ನಾಲ್ಕು ದಿನಗಳ ಕಾಲ ಅಲ್ಲಿಯೇ ತಂಗುವರು. ಈ ಅವಧಿಯಲ್ಲಿ ಅವರು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವರು ಎಂದು ಮೂಲಗಳು ತಿಳಿಸಿವೆ.

ಐತಿಹಾಸಿಕ ಮಹತ್ವ: ಮದ್ರಾಸ್‌ ವಿಧಾನ ಪರಿಷತ್‌ನಲ್ಲಿ ಹಲವು ಮಹತ್ವದ ಶಾಸನಗಳನ್ನು ಅಂಗೀಕರಿಸಲಾಗಿದೆ. ಹಿಂದೂ ಧಾರ್ಮಿಕ ದತ್ತಿ ಕಾಯ್ದೆ (1926), ದೇವದಾಸಿ ಪದ್ಧತಿ ನಿರ್ಮೂಲನೆ ಕಾಯ್ದೆ, ಬಡವರಿಗೆ ನಿವೇಶನಗಳನ್ನು ಉಚಿತವಾಗಿ ಹಂಚಿಕೆ ಮಾಡುವ ಕಾಯ್ದೆಗಳನ್ನು ಅಂಗೀಕರಿಸಿದ್ದು ಇದರ ಹೆಗ್ಗಳಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.