ಧಾರವಾಡ: ಲಂಚ ಸ್ವೀಕರಿಸುತ್ತಿದ್ದಾಗ ಸಿಕ್ಕಿಬಿದ್ದ ಬೆಳಗಾವಿಯಲ್ಲಿರುವ ಕೇಂದ್ರ ಅಬಕಾರಿ ಮತ್ತು ತೆರಿಗೆ (ಜಿಎಸ್ಟಿ) ಕಮಿಷನರೇಟ್ ಕಚೇರಿಯ ಮೂವರು ಅಧಿಕಾರಿಗಳನ್ನು ಇದೇ 30ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಇಲ್ಲಿನ ವಿಶೇಷ ಸಿಬಿಐ ನ್ಯಾಯಾಲಯ ಆದೇಶಿಸಿದೆ.
ಇನ್ಸ್ಟೆಕ್ಟರ್ ವೈಭವ ಗೋಯಲ್, ಸೂಪರಿಟೆಂಡೆಂಟ್ ಸುರೇಶ ಜಡಗಿ ಮತ್ತು ಡೆಪ್ಯುಟಿ ಸುಪರಿಟೆಂಡೆಂಟ್ ಮೋಹನಕುಮಾರ್ ಅವರೇ ಬಂಧಿತರು.
ಜಿಎಸ್ಟಿ ಕಡಿಮೆ ಮಾಡಲು ಈ ಅಧಿಕಾರಿಗಳು ₹20 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಕುರಿತು ಆರ್.ಎನ್. ಪಾನ್ಮಸಾಲಾ ಕಂಪನಿ ಮಾಲೀಕ ರಾಜಲಕ್ಷ್ಮಣ ಎನ್ನುವವರು ಬೆಂಗಳೂರಿನ ಸಿಬಿಐ ಕಚೇರಿಗೆ ದೂರು ನೀಡಿದ್ದರು. ಬುಧವಾರ ಬೆಳಗಾವಿಗೆ ಬಂದ ಸಿಬಿಐ ತಂಡ, ಭ್ರಷ್ಟಾಚಾರ ನಿಗ್ರಹ ದಳದೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿದ್ದರು. ದೂರುದಾರರಿಂದ ₹5 ಲಕ್ಷ ಹಣ ಸ್ವೀಕರಿಸುವಾಗಆರೋಪಿಗಳನ್ನು ಬಂಧಿಸಲಾಗಿತ್ತು.
ಗುರುವಾರ ಆರೋಪಿಗಳನ್ನು ಇಲ್ಲಿನ 3ನೇ ಹೆಚ್ಚುವರಿ ವಿಶೇಷ ಸಿಬಿಐ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.ಈ ಮಧ್ಯೆ, ಆರೋಪಿಗಳು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಶುಕ್ರವಾರ ತಕರಾರು ಅರ್ಜಿ ಸಲ್ಲಿಸಲು ನ್ಯಾಯಾಲಯ ಸೂಚಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.