ನವದೆಹಲಿ: ರೈತರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರವು ಸಮಗ್ರ ಕ್ರಮಗಳನ್ನು ಕೈಗೊಂಡಿದೆ. ಆದಾಗ್ಯೂ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಮತ್ತು ಕೃಷಿ ಕಾಯ್ದೆಗಳಿಗೆ ಸಂಬಂಧಿಸಿದಂತೆ ವಿಪಕ್ಷಗಳು ಅವರನ್ನು ದಾರಿ ತಪ್ಪಿಸುತ್ತಿವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಕಿಡಿ ಕಾರಿದ್ದಾರೆ.
ಕೋವಿಡ್-19 ಮತ್ತು ಅದರ ಪರಿಣಾಮವನ್ನು ನಿಭಾಯಿಸುವುದಕ್ಕೆ ಸಂಬಂಧಿಸಿದಂತೆ ಪಕ್ಷದ ಕಿಸಾನ್ ಮೋರ್ಚಾದ ಪ್ರತಿನಿಧಿಗಳು ನಡೆಸುತ್ತಿರುವʼಮೇರಾ ಬೂತ್ ಕೊರೊನಾ ಮುಕ್ತ್ʼ ಅಭಿಯಾನವನ್ನುದ್ದೇಶಿಸಿ ನಡ್ಡಾ ಮಾತನಾಡಿದ್ದಾರೆ.ನರೇಂದ್ರ ಮೋದಿ ಸರ್ಕಾರ ಅಧಿಕಾರ ವಹಿಸಿಕೊಂಡ ಮೊದಲ ದಿನದಿಂದಲೇ ರೈತರ ಕಲ್ಯಾಣಕ್ಕಾಗಿ ಸಮರ್ಪಿತವಾಗಿದೆ. ರೈತರ ಕಲ್ಯಾಣಕ್ಕಾಗಿ ಹಲವು ಉಪಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ʼಹಲವು ರಾಜಕೀಯ ಪಕ್ಷಗಳು ರೈತರ ಬಗ್ಗೆ ಮಾತನಾಡುತ್ತಿವೆ. ಆದರೆ,ಅವರಿಗಾಗಿ ಏನನ್ನೂ ಮಾಡಿಲ್ಲ. ಕಿಸಾನ್ ಸಮ್ಮಾನ್, ಕಿಸಾನ್ ಕ್ರೆಡಿಟ್ ಕಾರ್ಡ್,ಮಣ್ಣಿನಫಲವತ್ತತೆ ಕಾರ್ಡ್,ಬೇವುಲೇಪಿತ ಯೂರಿಯಾ ಮುಂತಾದ ಯೋಜನೆಗಳನ್ನು ಕೇಂದ್ರ ಸರ್ಕಾರವು ರೈತರಿಗಾಗಿ ಜಾರಿಗೊಳಿಸಿದೆʼ ಎಂದಿದ್ದಾರೆ. ಮುಂದುವರಿದು,ಸರ್ಕಾರದ ಸಂಸ್ಥೆಗಳು ಕನಿಷ್ಠ ಬೆಂಬಲ ಬೆಲೆಗೆ ಬೆಳೆ ಖರೀದಿಸುವುದನ್ನು ಮುಂದುವರಿಸುತ್ತವೆ. ಪಂಜಾಬ್ನಲ್ಲಿಯೂಗಣನೀಯ ಪ್ರಮಾಣದ ಖರೀದಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ʼನಮ್ಮ ವಿರೋಧ ಪಕ್ಷಗಳು ಎಂಎಸ್ಪಿ ವಿಚಾರವಾಗಿ ಅಳುತ್ತಿವೆ. ಪ್ರಧಾನಿ ಮೋದಿ ಅವರು ಎಂಎಸ್ಪಿ ಮುಂದುವರಿಯುತ್ತದೆ ಎಂದು ಮತ್ತೆ ಮತ್ತೆ ಹೇಳಿದ್ದಾರೆ. ಇದೀಗ ಮಧ್ಯವರ್ತಿಗಳು ರೈತರಿಗೆ ಮೋಸ ಮಾಡದಂತೆಕೇಂದ್ರ ಸರ್ಕಾರವು ಖಾತ್ರಿಪಡಿಸುತ್ತಿದೆʼ ಎಂದು ಸ್ಪಷ್ಟಪಡಿಸಿದ್ದಾರೆ.
ರೈತರ ಆದಾಯ ಹೆಚ್ಚಿಸುವ ಸಲುವಾಗಿ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ ಸುಮಾರು9.5 ಕೋಟಿ ಫಲಾನುಭವಿಗಳಿಗೆ ಮೇ 14ರಂದು ರೂ.20,000 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.