ಲಖನೌ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಲಾಭಕೋರರ ಜೊತೆ ಕೈಜೋಡಿಸಿದೆ ಮತ್ತು ರೈತರಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ನೀಡಲು ಅದಕ್ಕೆ ಮನಸ್ಸಿಲ್ಲ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮಂಗಳವಾರ ವಾಗ್ದಾಳಿ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಹೆಸರಿನಲ್ಲಿ ಮತ ಬಯಸುವ ಮತ್ತು ಎಂ.ಎಸ್.ಸ್ವಾಮಿನಾಥನ್ ಮತ್ತು ಚೌದರಿ ಚರಣ್ ಸಿಂಗ್ ಅವರಿಗೆ ‘ಭಾರತ ರತ್ನ’ ನೀಡಿದ ಸರ್ಕಾರಕ್ಕೆ ರೈತರಿಗೆ ಎಂಎಸ್ಪಿ ನೀಡಲು ಏಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದರು.
‘ಒಂದೋ, ಎಂಎಸ್ಪಿ ನೀಡಲು ಸರ್ಕಾರಕ್ಕೇ ಮನಸ್ಸಿಲ್ಲ ಅಥವಾ ಲಾಭ ಬಯಸುವ ದೊಡ್ಡವರೊಂದಿಗೆ ಕೈಜೋಡಿಸಿದೆ. ಹೀಗಾಗಿ ರೈತರ ಧ್ವನಿಯನ್ನು ಹತ್ತಿಕ್ಕಲು ಸರ್ಕಾರ ಇಂಥ ಕ್ರಮ ಕೈಗೊಳ್ಳುತ್ತಿದೆ’ ಎಂದು ಹೇಳಿದರು.
‘ರೈತರ ಆದಾಯವನ್ನು ದ್ವಿಗುಣ ಮಾಡುತ್ತೇವೆ, ಎಂಎಸ್ಪಿ ಜಾರಿ ಮಾಡುತ್ತೇವೆ ಎಂದವರೇ ಇಂದು ರೈತರ ಧ್ವನಿಯನ್ನು ಹತ್ತಿಕ್ಕುತ್ತಿದ್ದಾರೆ. ಕೆಲ ವರ್ಷಗಳ ಹಿಂದೆ ರೈತರು ಇದೇ ರೀತಿ ಬಂದು ಧರಣಿ ಕುಳಿತಿದ್ದರು. ಇದರಿಂದಾಗಿ 800ಕ್ಕೂ ಹೆಚ್ಚು ರೈತರು ಪ್ರಾಣ ಕಳೆದುಕೊಂಡಿದ್ದರು. ಇಷ್ಟಾಗಿಯೂ ಸರ್ಕಾರ ರೈತರಿಗೆ ಎಂಎಸ್ಪಿ ನೀಡುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರವು ರೈತರ ಬೇಡಿಕೆಯನ್ನು ಈಡೇರಿಸುವ ಬದಲಾಗಿ ಅವರ ಮೇಲೆ ಅಶ್ರುವಾಯು ಪ್ರಯೋಗಿಸುತ್ತಿದೆ ಅವರನ್ನು ಜೈಲಿಗೆ ಅಟ್ಟುತ್ತಿದೆ. ಇನ್ನೊಂದೆಡೆ ಎಂ.ಎಸ್.ಸ್ವಾಮಿನಾಥನ್ ಅವರಿಗೆ ಭಾರತ ರತ್ನ ನೀಡಿದೆ. ಆದರೆ ಅವರು ನೀಡಿರುವ ಸಲಹೆಗಳನ್ನು ಅನುಷ್ಠಾನ ಮಾಡಲು ಅದು ಸಿದ್ಧವಿಲ್ಲ.ರಾಹುಲ್ ಗಾಂಧಿ ಕಾಂಗ್ರೆಸ್ ನಾಯಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.