ADVERTISEMENT

ಉಪದ್ರವಕಾರಿ ಪ್ರಾಣಿಯಾಗಿ ಕಾಡುಹಂದಿ; ಕೇರಳದ ಮನವಿ ತಿರಸ್ಕರಿಸಿದ ಕೇಂದ್ರ

ಪಿಟಿಐ
Published 22 ನವೆಂಬರ್ 2021, 10:54 IST
Last Updated 22 ನವೆಂಬರ್ 2021, 10:54 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ/ತಿರುವನಂತಪುರ: ಕಾಡು ಹಂದಿಯನ್ನು ಉಪದ್ರವಕಾರಿ ಪ್ರಾಣಿ ಎಂದು ಘೋಷಿಸಲು ಅನುಮತಿ ಕೋರಿದ್ದ ಕೇರಳ ಸರ್ಕಾರದ ಮನವಿಯನ್ನು ಕೇಂದ್ರ ಪರಿಸರ ಸಚಿವಾಲಯವು ಸೋಮವಾರ ತಿರಸ್ಕರಿಸಿದೆ. ‘ಪ್ರಾಣಿ ಕೊಲ್ಲಲು ಜನರಿಗೆ ಅವಕಾಶ ನೀಡಿದರೆ ಒಳ್ಳೆಯದಾಗಲಿದೆ ಎಂಬುದಕ್ಕಿಂತ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ’ ಎಂದು ಸಚಿವಾಲಯ ಅಭಿಪ್ರಾಯಪಟ್ಟಿದೆ.

‘ಪರಿಸ್ಥಿತಿಯನ್ನು ನಿಭಾಯಿಸಲು ಪರ್ಯಾಯ ಮಾರ್ಗಗಳಿವೆಯೇ ಎಂಬುದನ್ನು ಸಚಿವಾಲಯ ಪರಿಶೀಲಿಸಲಿದೆ ಎಂದು ಕೇಂದ್ರ ಪರಿಸರ ಸಚಿವ ಭೂಪೆಂದರ್‌ ಯಾದವ್ ಭರವಸೆ ನೀಡಿದ್ದಾರೆ’ ಎಂದು ಕೇರಳದ ಅರಣ್ಯ ಸಚಿವ ಎ.ಕೆ.ಸಸೀಂದ್ರನ್‌ ತಿಳಿಸಿದರು. ಯಾದವ್‌ ಅವರನ್ನು ದೆಹಲಿಯಲ್ಲಿ ಭೇಟಿಯಾಗಿದ್ದ ಸಸೀಂದ್ರನ್‌ ಅರಣ್ಯ ಗಡಿಭಾಗದ ಗ್ರಾಮಗಳ ಜನರ ಸಂಕಷ್ಟವನ್ನು ವಿವರಿಸಿದರು.

‘ಕಾಡುಹಂದಿಯ ಸಂತತಿ ಹೆಚ್ಚಿದೆ. ಅವುಗಳ ದಾಳಿಯಿಂದ ಬೆಳೆ ಹಾನಿಯಾಗುತ್ತಿದೆ. ಇದರಿಂದ ಗಡಿ ಗ್ರಾಮಗಳ ಜನರ ಜೀವನದ ಮೇಲೆ ಪ್ರತಿಕೂಲ ಪರಿಣಾಮವಾಗುತ್ತಿದೆ. ಹೀಗಾಗಿ, ಉಪದ್ರವಕಾರಿ ಪ್ರಾಣಿ ಎಂದು ಘೋಷಿಸಬೇಕು’ ಎಂದು ಗಮನಕ್ಕೆ ತಂದರು.

ADVERTISEMENT

ಕಾಡುಹಂದಿಯ ಪಿಡುಗು ತಡೆಗೆ ರಾಜ್ಯ ಸರ್ಕಾರ ಕೈಗೊಂಡಿದ್ದ ಕ್ರಮಗಳು ಫಲಕಾರಿಯಾಗಿಲ್ಲದ ಕಾರಣ, ಕೃಷಿಭೂಮಿಗೆ ಬರುವ ಕಾಡುಹಂದಿಗಳನ್ನು ಕೊಲ್ಲಬಹುದು ಎಂದು ಕೆಲ ರೈತರಿಗೆ ಕೇರಳದ ಹೈಕೋರ್ಟ್ ಇದೇ ವರ್ಷದ ಜುಲೈನಲ್ಲಿ ಅನುಮತಿ ನೀಡಿತ್ತು.

ವನ್ಯಜೀವಿಗಳು ಅರಣ್ಯದ ಗಡಿಯಂಚಿನ ಗ್ರಾಮಗಳಿಗೆ ಬರುವುದನ್ನು ತಡೆಯಲು, ಅರಣ್ಯದೊಳಗೆ ಅಗತ್ಯ ವಸತಿ ವಾತಾವರಣ ರೂಪಿಸಲು ₹ 670 ಕೋಟಿ ನೆರವು ಕೋರಿ ಇದೇ ಸಂದರ್ಭದಲ್ಲಿ ಅವರು ಕೇಂದ್ರ ಸಚಿವರಿಗೆ ಮನವಿಪತ್ರವನ್ನು ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.