ಕೋಲ್ಕತ್ತ: ರಾಜ್ಯದ ಮುರ್ಶಿದಾಬಾದ್ ಮತ್ತು ಮಹೇಶ್ತಲಾದಲ್ಲಿನ ಹಿಂಸಾಚಾರ ವಿಚಾರವು ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಗುರುವಾರ ಪ್ರತಿಧ್ವನಿಸಿತಲ್ಲದೇ, ಈ ಬಗ್ಗೆ ನಿಲುವಳಿ ಸೂಚನೆ ಮಂಡನೆಗೆ ಅವಕಾಶ ನೀಡದ ಸ್ಪೀಕರ್ ಧೋರಣೆ ಖಂಡಿಸಿ ವಿರೋಧ ಪಕ್ಷವಾದ ಬಿಜೆಪಿಯ ಶಾಸಕರು ಸಭಾತ್ಯಾಗ ಮಾಡಿದರು.
ಒಂದು ಹಂತದಲ್ಲಿ, ‘ಸ್ಪೀಕರ್ ಬಿಮನ್ ಬ್ಯಾನರ್ಜಿ ಟಿಎಂಸಿ ಕಾರ್ಯಕರ್ತರಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ’ ಎಂದು ಬಿಜೆಪಿ ಶಾಸಕರು ಟೀಕಿಸಿದರು. ‘ಬಿಜೆಪಿ ಶಾಸಕರು ಸದನದ ಶಿಷ್ಟಾಚಾರ ಪಾಲನೆ ಮಾಡುತ್ತಿಲ್ಲ’ ಎಂದು ಸ್ಪೀಕರ್ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದಕ್ಕೂ ಸದನ ಸಾಕ್ಷಿಯಾಯಿತು.
ಕಲಾಪ ಆರಂಭಗೊಳ್ಳುತ್ತಿದ್ದಂತೆಯೇ, ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಹಾಗೂ ಇತರ ಮೂವರು ಶಾಸಕರು ಮುರ್ಶಿದಾಬಾದ್ನಲ್ಲಿ ನಡೆದ ಹಿಂಸಾಚಾರ ಕುರಿತು ನಿಲುವಳಿ ಸೂಚನೆ ಮಂಡಿಸಿದರು. ಬಿಜೆಪಿಯ ಮತ್ತೊಬ್ಬ ಶಾಸಕ ಪುನಾ ಭೆಂಗ್ರಾ ಅವರು ಮಹೇಶ್ತಲಾದಲ್ಲಿ ಬುಧವಾರ ನಡೆದ ಹಿಂಸಾಚಾರ ಕುರಿತು ನಿಲುವಳಿ ಸೂಚನೆ ಮಂಡಿಸಲು ಮುಂದಾದರು.
ಸ್ಪೀಕರ್ ಬ್ಯಾನರ್ಜಿ ಅವರು ಈ ಎರಡೂ ಸೂಚನೆಗಳನ್ನು ತಿರಸ್ಕರಿಸಿದಾಗ, ಬಿಜೆಪಿ ಶಾಸಕರು ಪ್ರತಿಭಟನೆ ಆರಂಭಿಸಿದರು. ಟಿಎಂಸಿ ವಿರುದ್ಧ ಘೋಷಣೆಳನ್ನು ಕೂಗತ್ತಾ, ಸ್ಪೀಕರ್ ಪೀಠದ ಮುಂದೆ ಜಮಾಯಿಸಿದರು. ನಂತರ ಸುವೇಂದು ಅಧಿಕಾರಿ ನೇತೃತ್ವದಲ್ಲಿ ಬಿಜೆಪಿಯ ಎಲ್ಲ ಶಾಸಕರು ಸದನದಿಂದ ಹೊರನಡೆದರು. ಬಳಿಕ, ಸ್ಪೀಕರ್ ಕಲಾಪ ಮುಂದುವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.