ಚಂಡೀಗಡ: ಭಾನುವಾರ (ಸೆ.26) ಸಂಜೆ 4.30ಕ್ಕೆ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ತಿಳಿಸಿದ್ದಾರೆ.
ನೂತನ ಸಚಿವರ ಅಂತಿಮಗೊಂಡ ಪಟ್ಟಿಯೊಂದಿಗೆ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರನ್ನು ಶನಿವಾರ ಭೇಟಿ ಮಾಡಿದ ನಂತರ ಅವರು ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.
ನೂತನ ಸಚಿವ ಸಂಪುಟದಲ್ಲಿ ಏಳು ಮಂದಿ ಹೊಸಬರಿಗೆ ಅವಕಾಶ ಸಿಗುವ ಸಾಧ್ಯತೆ ಇದ್ದು, ಅಮರಿಂದರ್ ಸಿಂಗ್ ನೇತೃತ್ವದ ಸಂಪುಟದಲ್ಲಿದ್ದ ಸಚಿವರಾಗಿದ್ದ ಐವರನ್ನು ಕೈಬಿಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಪರ್ಗತ್ ಸಿಂಗ್, ರಾಜ್ಕುಮಾರ್ ವೆರ್ಕಾ, ಗುರಕೀರತ್ ಸಿಂಗ್ ಕೋಟ್ಲಿ, ಸಂಗತ್ ಸಿಂಗ್ ಗಿಲ್ಜಿಯಾನ್, ಅಮರಿಂದರ್ ಸಿಂಗ್ ರಾಜ್ ವಾರಿಂಗ್, ಕುಲ್ಜೀತ್ ನಗ್ರಾ ಮತ್ತು ರಾಣಾ ಗುರ್ಜೀತ್ ಸಿಂಗ್ ಅವರು ನೂತನ ಸಂಪುಟಕ್ಕೆ ಸೇರ್ಪಡೆಯಾಗುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಅಮರಿಂದರ್ ಸಿಂಗ್ ನೇತೃತ್ವದ ಸಚಿವ ಸಂಪುಟದಲ್ಲಿದ್ದ ವಿಜಯ್ ಇಂದರ್ ಸಿಂಗ್ಲಾ, ಮನಪ್ರೀತ್ ಸಿಂಗ್ ಬಾದಲ್, ಬ್ರಹ್ಮ ಮೊಹಿಂದರ್, ಸುಖಬಿಂದರ್ ಸಿಂಗ್ ಸರ್ಕಾರಿಯಾ, ತೃಪ್ತ್ ರಾಜಿಂದರ್ ಸಿಂಗ್ ಬಜ್ವಾ, ಅರುನು ಚೌಧರಿ, ರಝಿಯಾ ಸುಲ್ತಾನಾ ಮತ್ತು ಭರತ್ ಭೂಷಣ್ ಅಶು ಅವರನ್ನು ಉಳಿಸಿಕೊಳ್ಳಲು ಪಕ್ಷ ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.