ADVERTISEMENT

ಛತ್ತೀಸಗಡ: ತಿಥಿ–ಸಮಾರಾಧನೆಯ ಊಟ ಸೇವಿಸಿ ಮಕ್ಕಳು ಸೇರಿ, ನೂರು ಮಂದಿ ಅಸ್ವಸ್ಥ

ಆಸ್ಪತ್ರೆಗೆ ದಾಖಲು

ಪಿಟಿಐ
Published 7 ಅಕ್ಟೋಬರ್ 2021, 8:18 IST
Last Updated 7 ಅಕ್ಟೋಬರ್ 2021, 8:18 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಹಸಮುಂಡ್‌ (ಛತ್ತೀಸಗಡ): ಜಿಲ್ಲೆಯ ಗ್ರಾಮವೊಂದರಲ್ಲಿ ಆಯೋಜಿಸಿದ್ದ ‘ದಸ್‌ಗಾತ್ರ್‘ (ಮೃತಪಟ್ಟ ವ್ಯಕ್ತಿಯ ಹತ್ತನೇ ದಿನದ ಕಾರ್ಯ) ಕಾರ್ಯಕ್ರಮದಲ್ಲಿ ಆಹಾರ ಸೇವಿಸಿದ ನಂತರ ಮಕ್ಕಳು ಸೇರಿದಂತೆ, ನೂರು ಮಂದಿ ಅಸ್ವಸ್ಥಗೊಂಡಿದ್ದು, ಅವರೆಲ್ಲರನ್ನೂ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ಘಟನೆಯಲ್ಲಿ ಯಾವುದೇ ಪ್ರಾಣಾಪಾಯವಾದ ವರದಿಯಾಗಿಲ್ಲ. ಚಿಕಿತ್ಸೆ ಪಡೆಯುತ್ತಿರುವವರೆಲ್ಲರೂ ಅಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲೆಯ ಪಿಥೋರಾ ಡೆವಲಪ್‌ಮೆಂಟ್‌ ಬ್ಲಾಕ್ ವ್ಯಾಪ್ತಿಯಲ್ಲಿರುವ ಅನ್ಸುಲಾ ಗ್ರಾಮದಲ್ಲಿ ಬುಧವಾರ ಸಂಜೆ ಈ ಘಟನೆ ನಡೆದಿದೆ.ಈ ಗ್ರಾಮದ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ದಿಲೀಪ್ ಸಾಹು ಎಂಬುವವರು ದಸ್‌ಗಾತ್ರ್‌ ಕಾರ್ಯಕ್ರಮವನ್ನು ಆಯೋಜಿಸಿದ್ದರು ಎಂದು ಜಿಲ್ಲಾಧಿಕಾರಿ ಡೊಮನ್ ಸಿಂಗ್ ತಿಳಿಸಿದ್ದಾರೆ.

ADVERTISEMENT

ಅಸ್ವಸ್ಥರಾದ ನೂರು ಜನರಲ್ಲಿ, 50 ಮಕ್ಕಳು ಮತ್ತು ಇತರೆ ಹತ್ತು ಜನರನ್ನು ಎರಡು ಆಸ್ಪತ್ರೆಗಳಿಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಉಳಿದವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗಿದೆ.

ಕಾರ್ಯಕ್ರಮದಲ್ಲಿ ಸ್ಥಳೀಯ ಶಾಲೆ ಮತ್ತು ಸುತ್ತಲಿನ ಶಿಕ್ಷಣ ಸಂಸ್ಥೆಗಳ ಮಕ್ಕಳು ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು. ಆಹಾರ ಸೇವಿಸಿ ಎರಡು– ಮೂರು ಗಂಟೆಗಳ ನಂತರ, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸುಮಾರು ನೂರು ಮಂದಿ ಅಸ್ವಸ್ಥರಾದರು. ತಕ್ಷಣ ಎಲ್ಲರನ್ನೂ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಸಿಂಗ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.