ADVERTISEMENT

ಕಲ್ಲಿದ್ದಲು ತೆರಿಗೆ ಹಗರಣ; ₹151 ಕೋಟಿ ಮೌಲ್ಯದ ಆಸ್ತಿ ಜಪ್ತಿ

ಪಿಟಿಐ
Published 10 ಡಿಸೆಂಬರ್ 2022, 13:09 IST
Last Updated 10 ಡಿಸೆಂಬರ್ 2022, 13:09 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕಲ್ಲಿದ್ದಲು ತೆರಿಗೆ ಹಗರಣ ಕುರಿತ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಎಸ್‌ ಅಧಿಕಾರಿಗಳು, ಕಲ್ಲಿದ್ದಲು ವರ್ತಕರಿಗೆ ಸೇರಿದ ಒಟ್ಟು ₹ 152.31 ಕೋಟಿ ಮೌಲ್ಯದ ಆಸ್ತಿಗಳನ್ನು ಇ.ಡಿ ಜಪ್ತಿ ಮಾಡಿದೆ.

ಈಗ ಬಂಧನದಲ್ಲಿರುವ ಛತ್ತೀಸಗಢ ಮುಖ್ಯಮಂತ್ರಿಯ ಉಪ ಕಾರ್ಯದರ್ಶಿ ಸೌಮ್ಯಾ ಚೌರಾಸಿಯಾ, ಐಎಎಸ್‌ ಅಧಿಕಾರಿ ಸಮೀರ್‌ ವಿಷ್ಣೋಯಿ, ಕಲ್ಲಿದ್ದಲು ವರ್ತಕ, ಪ್ರಕರಣದ ಪ್ರಮುಖ ಆರೋಪಿ ಸೂರ್ಯಕಾಂತ್ ತಿವಾರಿ ಅವರಿಗೆ ಈ ಆಸ್ತಿಗಳು ಸೇರಿದ್ದಾಗಿವೆ.

ಸೌಮ್ಯಾ ಅವರ ಒಡೆತನದ ಫ್ಲ್ಯಾಟ್‌ ಸೇರಿದಂತೆ 21 ಆಸ್ತಿಗಳು, ತಿವಾರಿಗೆ ಸೇರಿದ್ದ ಕಲ್ಲಿದ್ದಲು ಸ್ಥಾವರದ ಪರಿಕರಗಳು, ಐಎಎಸ್‌ ಅಧಿಕಾರಿ ಸಮೀರ್ ವಿಷ್ಣೋಯಿ ಅವರಿಗೆ ಸೇರಿದ ಐದು ಆಸ್ತಿಗಳು ಜಪ್ತಿಯಾಗಿರುವುದರಲ್ಲಿ ಸೇರಿವೆ. ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ (ಪಿಎಂಎಲ್‌ಎ) ಒಟ್ಟು 91 ಸ್ಥಿರಾಸ್ತಿಗಳ ಜಪ್ತಿಗೆ ತನಿಖಾ ಸಂಸ್ಥೆಯು ಆದೇಶ ನೀಡಿತ್ತು.

ADVERTISEMENT

ಸೌಮ್ಯಾ ಚೌರಾಸಿಯಾ ಅವರು ಛತ್ತೀಸಗಢ ರಾಜ್ಯಸೇವೆ ಅಧಿಕಾರಿಣಿ. ಮುಖ್ಯಮಂತ್ರಿಗಳ ಸಚಿವಾಲಯದಲ್ಲಿ ನಿಯೋಜನೆಗೊಂಡಿದ್ದ ಪ್ರಭಾವಿಯಾಗಿದ್ದರು. ಕಲ್ಲಿದ್ದಲು ಉದ್ಯಮಿ ಸುನಿಲ್ ಅಗರವಾಲ್‌ ಮತ್ತು ಇತರರಿಗೆ ಸೇರಿದ ಆಸ್ತಿಗಳನ್ನೂ ಜಪ್ತಿ ಮಾಡಲಾಗಿದೆ.

ಹಗರಣ ಸಂಬಂಧ ಐವರನ್ನು ಈಗಾಗಲೇ ಬಂಧಿಸಲಾಗಿದೆ. ಪ್ರತಿ ಟನ್‌ಕಲ್ಲಿದ್ದಲು ಸಾಗಣೆಗೆ ಅಕ್ರಮವಾಗಿ ₹25 ವಸೂಲಿ ಮಾಡಲಾಗುತ್ತಿದ್ದು, ಅಧಿಕಾರಿಗಳು, ಉದ್ಯಮಿಗಳು, ರಾಜಕಾರಣಿಗಳು, ಮಧ್ಯವರ್ತಿಗಳು ಈ ಜಾಲದಲ್ಲಿದ್ದರು ಎಂದು ಇ.ಡಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.